ಮರ್ಯಾದೆ ಕೊಟ್ಟು ಮಾತನಾಡ್ತಿಲ್ಲ ಎಂದು ಕಪಾಳಮೋಕ್ಷ ಮಾಡಿದ್ದ ಸ್ನೇಹಿತನ ಕೊಲೆ

ಬೆಂಗಳೂರು: ಮರ್ಯಾದೆ ಕೊಟ್ಟು ಮಾತನಾಡುತ್ತಿಲ್ಲ ಎಂದು ಕಪಾಳಮೋಕ್ಷ ಮಾಡಿದ ಸ್ನೇಹಿತನನ್ನು ವ್ಯಕ್ತಿ ಕೊಲೆ ಮಾಡಿದ ಘಟನೆ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‍ನಲ್ಲಿ ನಡೆದಿದೆ.

ಕಳೆದ ಜನವರಿ ತಿಂಗಳ ಭಾನುವಾರ ರಾತ್ರಿ ಮಲಗಿದ್ದ ರಮೇಶ್ ಎಂಬಾತ ಬೆಳಗ್ಗೆ ಆಗುವಷ್ಟರಲ್ಲಿ ಮೃತಪಟ್ಟಿದ್ದನು. ರಮೇಶ್ ಸಾವನ್ನಪ್ಪಿ ನಾಲ್ಕು ದಿನಗಳ ನಂತ್ರ ಅಕ್ಕಪಕ್ಕದವರಿಗೆ ವಿಷಯ ಗೊತ್ತಾಗಿತ್ತು. ವಿಷಯ ತಿಳಿದ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಪರಿಶೀಲನೆ ನಡೆಸಿದಾಗ ಮೇಲ್ನೋಟಕ್ಕೆ ಅತಿಯಾದ ಕುಡಿತದಿಂದ ಹೃದಯಾಘಾತವಾಗಿ ಮೃತಪಟ್ಟಿರಬಹುದು ಎಂದು ಶಂಕಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದರು.

ನಡೆದಿದ್ದೇನು?
ಉತ್ತರಪ್ರದೇಶದ ಗೋರಖ್‍ಪುರದಿಂದ ಬೆಂಗಳೂರಿಗೆ ಬಂದು ಕಾರ್ಪೆಂಟರ್ ಕೆಲಸ ಮಾಡುತ್ತಿದ್ದ ಮೃತ ರಮೇಶ್ ಮತ್ತು ಮನೋಹರ್ ಚಿಕ್ಕಂದಿನಿಂದಲೂ ಒಳ್ಳೆಯ ಸ್ನೇಹಿತರಾಗಿದ್ದವರು. ಅದೇ ಕಾರಣಕ್ಕೆ ಕೆಲಸ ಹುಡುಕಿಕೊಂಡು ಜೊತೆಗೆ ಬೆಂಗಳೂರಿಗೆ ಬಂದಿದ್ದರು. ಜನವರಿಯ ರಜೆ ದಿನ ಇಬ್ಬರು ಕುಳಿತುಕೊಂಡು ಕಂಠಪೂರ್ತಿ ಕುಡಿದಿದ್ದರು. ಈ ವೇಳೆ ರಮೇಶ್, ಇತ್ತೀಚಿಗೆ ನೀನು ನನಗೆ ಮಾರ್ಯಾದೆ ಕೊಟ್ಟು ಮಾತಾಡ್ತಿಲ್ಲ, ಎಂದು ಮನೋಹರ್ ಕಪಾಳಕ್ಕೆ ಹೊಡೆದಿದ್ದ. ಇದರಿಂದ ಕೋಪಗೊಂಡ ಮನೋಹರ್ ರಮೇಶ್ ಎದೆಗೆ ಬಲವಾಗಿ ಒದ್ದಿದ್ದ, ಪರಿಣಾಮ ರಮೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದನು.

ಮೃತದ ದೇಹದ ಮರಣೋತ್ತರ ಪರೀಕ್ಷೆಯ ವರದಿ ನೋಡಿದ ಪೊಲೀಸರಿಗೆ ಎದೆಮೂಳೆ ಮುರಿದಿರುವುದು ಪತ್ತೆಯಾಗಿತ್ತು. ಈ ನಿಟ್ಟಿನಲ್ಲಿ ತನಿಖೆಗೆ ಇಳಿದ ಪೊಲೀಸರು ಆರೋಪಿ ಮನೋಹರ್‍ನನ್ನು ಉತ್ತರಪ್ರದೇಶದಲ್ಲಿ ಬಂಧಿಸಿ ಕರೆತಂದಿದ್ದಾರೆ.

Comments

Leave a Reply

Your email address will not be published. Required fields are marked *