ದೂರು ಕೊಡಲು ಬಂದು ತಾನೇ ಜೈಲು ಪಾಲಾದ

ರಾಮನಗರ: ಕುಡಿದ ಅಮಲಿನಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿರುವ ಘಟನೆ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ರಾಮನಗರ ತಾಲೂಕಿನ ವಿಭೂತಿಕೆರೆ ನಿವಾಸಿ ರಾಮು (35) ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ನಡೆಸಿ ಜೈಲು ಪಾಲಾದ ವ್ಯಕ್ತಿ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದೂರು ನೀಡಲು ಬಂದವ ಕುಡಿದ ಅಮಲಿನಲ್ಲಿ ತಾನೇ ಜೈಲು ಸೇರಿರುವುದು ರಾಜ್ಯದಲ್ಲಿ ಮೊದಲ ಪ್ರಕರಣ ಎನ್ನಲಾಗಿದೆ.

ರಾಮು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ರಾಮನಗರ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಲು ಕಂಠಪೂರ್ತಿ ಮದ್ಯ ಸೇವಿಸಿ ಬಂದಿದ್ದನು. ಈ ವೇಳೆ ಗ್ರಾಮಾಂತರ ಠಾಣೆಯ ಸೆಂಟ್ರಿ ಪ್ರವೀಣ್ ಸ್ವಲ್ಪ ಹೊತ್ತು ಕಾಯಿರಿ ದೂರು ಪಡೆಯುತ್ತೇವೆ ಎಂದಿದ್ದಾರೆ. ತಕ್ಷಣವೇ ಆಕ್ರೋಶಗೊಂಡ ರಾಮು ಕರ್ತವ್ಯನಿರತ ಪೊಲೀಸರಿಗೆ ಕಪಾಳಮೋಕ್ಷ ನಡೆಸಿ ಗಲಾಟೆ ಮಾಡಿದ್ದಾನೆ.

ಠಾಣೆಯ ಮುಖ್ಯಪೇದೆ ಮುತ್ತುರಾಜು, ಹೊರಗಡೆ ಮಾತನಾಡಿ, ಇದು ಠಾಣೆ, ಇಲ್ಲಿ ನಿಶ್ಯಬ್ದ ಕಾಪಾಡಬೇಕು ಎಂದಿದ್ದಾರೆ. ಇದರಿಂದ ರೊಚ್ಚಿಗೆದ್ದ ಆರೋಪಿ ರಾಮು ಪೇದೆಯ ಮುಖಕ್ಕೆ ಹೊಡೆದಿದ್ದಾನೆ. ಪೇದೆಯ ತುಟಿ ಸೇರಿದಂತೆ ಕೆನ್ನೆ ಕೂಡ ಗಾಯಗೊಂಡಿವೆ.

ಈ ಘಟನೆ ಸಂಬಂಧ ನಗರ ಠಾಣೆಯಲ್ಲಿ ಮುಖ್ಯಪೇದೆ ಮುತ್ತುರಾಜು ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಎಂದು ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

Comments

Leave a Reply

Your email address will not be published. Required fields are marked *