ಎಲ್ಲಿಂದ ಸ್ಪರ್ಧಿಸಿದ್ರೂ ನಿಮಗೆ ಸೋಲು ಖಚಿತ- ಮಾಜಿ ಜಡ್ಜ್‌ಗೆ ದೀದಿ ಚಾಲೆಂಜ್ ‌

ಕೋಲ್ಕತ್ತಾ: ಬಿಜೆಪಿ ಸೇರಿದ ಕೋಲ್ಕತ್ತಾ ಹೈಕೋರ್ಟ್ ಮಾಜಿ ನ್ಯಾಯಾಧೀಶ ಅಭಿಜಿತ್ ಗಂಗೋಪಾಧ್ಯಾಯ (Abhijit Gangopadhyay) ಅವರನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ.

ಅಭಿಜಿತ್ ಅವರು ಬಿಜೆಪಿ ಸೇರಿದ ಕೆಲ ಗಂಟೆಗಳಲ್ಲಿಯೇ ಪ್ರತಿಕ್ರಿಯೆ ನೀಡಿದ ದೀದಿ (Mamata Banerjee), ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನೀವು ಎಲ್ಲಿಂದ ಸ್ಪರ್ಧಿಸಿದರೂ ನಿಮಗೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಹೇಳುವ ಮೂಲಕ ಸವಾಲೆಸೆದಿದ್ದಾರೆ. ಇದನ್ನೂ ಓದಿ: ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೆ 30 ಲಕ್ಷ ಸರ್ಕಾರಿ ಉದ್ಯೋಗ- ಯುವಕರಿಗೆ ರಾಗಾ ಗ್ಯಾರಂಟಿ

ತೃಣಮೂಲ ಕಾಂಗ್ರೆಸ್ ಮುಖ್ಯಸ್ಥರಾಗಿದ್ದ ಗಂಗೋಪಾಧ್ಯಾಯ ಅವರು ತಮ್ಮ ತೀರ್ಪುಗಳ ಮೂಲಕ ಸಾವಿರಾರು ಯುವಕರ ಉದ್ಯೋಗಗಳನ್ನು ಕಸಿದುಕೊಂಡಿದ್ದಾರೆ ಎಂದು ಆರೋಪಿಸಿದರು. ಜೊತೆಗೆ ಯುವಕರು ಯಾವುದೇ ಕಾರಣಕ್ಕೂ ನಿಮ್ಮನ್ನು ಕ್ಷಮಿಸುವುದಿಲ್ಲ. ನಿಮ್ಮ ಎಲ್ಲಾ ತೀರ್ಪುಗಳು ಪ್ರಶ್ನಾರ್ಹವಾಗಿವೆ. ನಿಮ್ಮ ಸೋಲನ್ನು ನಾವು ಖಚಿತಪಡಿಸುತ್ತೇವೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಮಂಗಳವಾರ ಬೆಳಗ್ಗೆ ಕೋಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ ಹುದ್ದೆಗೆ ರಾಜೀನಾಮೆ ನೀಡಿದ ಗಂಗೋಪಾಧ್ಯಾಯ ಅವರು ಗುರುವಾರ ಬಿಜೆಪಿ ಸೇರಿದ್ದಾರೆ. ಸಾಲ್ಟ್ ಲೇಕ್‌ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್ ಅವರು ಮಾಜಿ ಜಡ್ಜ್‌ಗೆ ಪಕ್ಷದ ಧ್ವಜವನ್ನು ಹಸ್ತಾಂತರಿಸುವ ಮೂಲಕ ಬರಮಾಡಿಕೊಂಡರು.