ಮಗ ರಾತ್ರಿ ಹೊತ್ತು ನಿದ್ದೆ ಮಾಡುವಂತೆ ಮಾಡಪ್ಪ- ಕಾಣಿಕೆ ಹುಂಡಿಯಲ್ಲಿ ಅಪ್ಪನ ಪತ್ರ

Chikkamagaluru Letter

ಚಿಕ್ಕಮಗಳೂರು: ಭಕ್ತರು ಕಾಣಿಕೆ ಹುಂಡಿಗೆ ಚಿನ್ನ-ಬೆಳ್ಳಿಯ ಒಡವೆಗಳು, ಮುಖವಾಡ, ಬಳೆ, ಉಂಗುರ ಚೈನು, ಹಣ ಹೀಗೆ ನಾನಾ ರೀತಿಯ ವಸ್ತುಗಳನ್ನ ಹಾಕಿ ಹರಕೆ ತೀರಿಸುತ್ತಾರೆ. ಭಕ್ತನೋರ್ವ ಕಾಣಿಕೆ ಹುಂಡಿಯಲ್ಲಿ ಮಗ ರಾತ್ರಿ ಹೊತ್ತು ಬೇಗ ಮಲಗುವಂತೆ ಮಾಡು ಭಗವಂತ ಎಂದು ಪತ್ರ ಬರೆದು ಕಾಣಿಕೆ ಹುಂಡಿಯಲ್ಲಿ ಹಾಕಿರುವ ಅಪರೂಪದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಕಳಸ ತಾಲೂಕಿನಲ್ಲಿರುವ ದಕ್ಷಿಣ ಕಾಶಿ ಎಂದು ಖ್ಯಾತಿಯಾಗಿರುವ ಕಳಸ ಕಳಸೇಶ್ವರ ಸ್ವಾಮಿ ಹಾಗೂ ಪರಿವಾರ ದೇವರುಗಳ ಕಾಣಿಕೆ ಹುಂಡಿ ಎಣಿಕೆ ಕಾರ್ಯ ನಡೆಯಿತು. ಕಾಣಿಕೆ ಹುಂಡಿಯಲ್ಲಿ ಭಕ್ತನೋರ್ವ ಮಗನ ಇಡೀ ಬದುಕನ್ನೇ ಬದಲಿಸಪ್ಪಾ ಎಂದು ಪತ್ರ ಬರೆದು ಕಾಣಿಕೆ ಹುಂಡಿಗೆ ಹಾಕಿ ಬೇಡಿಕೊಂಡಿದ್ದಾರೆ. ಇದನ್ನೂ ಓದಿ: ಮಗ ಅಳುತ್ತಿದ್ದರೂ ನನ್ನ ಮೇಲೆ ಅತ್ಯಾಚಾರ ಮಾಡಿದ್ರು- ಉಕ್ರೇನ್ ಮಹಿಳೆ

ಪತ್ರದಲ್ಲಿ ಏನಿದೆ?: ಮಗನ ಹೆಸರು ಬರೆದಿರುವ ಅಪ್ಪ, ಮಗನ ಕುಡಿತದ ಚಟ ಬಿಡಿಸಿ ಒಳ್ಳೆಯ ಬುದ್ಧಿ ಕೊಡು. ಬೇಗ ಕೆಲಸ ಸಿಗುವಂತೆ ಮಾಡು. ಅವನ ಕುಡಿತದ ಚಟ ಹೋಗಲಾಡಿಸು. ಅವನು ಭಾರೀ ಮುಂಗೋಪಿ. ಅದನ್ನೂ ಕಡಿಮೆ ಮಾಡು. ಚಂಚಲ ಸ್ವಭಾವ ತೊಲಗಿಸು. ರಾತ್ರಿ ಹೊತ್ತು ಬೇಗ ಮಲಗುವಂತೆ ಮಾಡು. ಅವನಿಗಿರುವ ಭಯವನ್ನ ಹೋಗಲಾಡಿಸಿ ಧೈರ್ಯ ತುಂಬು, ಹೆಂಡತಿ ಮಕ್ಕಳನ್ನ ಚೆನ್ನಾಗಿ ನೋಡಿಕೊಳ್ಳುವಂತೆ ಬುದ್ಧಿಕೊಡು. ಮೊಮ್ಮಕ್ಕಳಿಗೂ ವಯಸ್ಸಿಗೆ ತಕ್ಕಂತೆ ಬುದ್ಧಿ ಕೊಡು. ಮಗಳ ಸಂಸಾರವನ್ನೂ ಚೆನ್ನಾಗಿ ಕಾಪಾಡು ತಂದೆ ಎಂದು ಬರೆದಿದ್ದಾರೆ. ಇದನ್ನೂ ಓದಿ: ಪ್ಲುಟೋದಲ್ಲಿ ಹೊಸ ವಿಸ್ಮಯ – ಸೌರವ್ಯೂಹದಲ್ಲಿ ಎಲ್ಲೂ ಕಾಣಿಸದ ಮಂಜಿನ ಜ್ವಾಲಾಮುಖಿಯ ಸುಳಿವು 

ಪತ್ರವನ್ನ ನೋಡಿದ ಅಧಿಕಾರಿಗಳು ನಸುನಕ್ಕು ಪತ್ರವನ್ನ ತೆಗೆದಿಟ್ಟು ಹಣ ಏಣಿಕೆ ಕಾರ್ಯ ಮುಂದುವರಿಸಿದ್ದಾರೆ. ಕಾಣಿಕೆ ಹುಂಡಿಯಲ್ಲಿ ಕಳೆದ ಐದು ತಿಂಗಳಲ್ಲಿ 19 ಲಕ್ಷದ 66 ಸಾವಿರದ 573 ರೂಪಾಯಿ ಹಣ ಸಂಗ್ರಹವಾಗಿದೆ. ಕೊರೊನಾ ಕಾರಣದಿಂದಾಗಿ ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಸಂಖ್ಯೆ ತೀರಾ ಇಳಿಮುಖವಾಗಿತ್ತು. ಇದರಿಂದ ದೇವಸ್ಥಾನದ ಆದಾಯಕ್ಕೂ ಪೆಟ್ಟು ಬಿದ್ದಿತ್ತು. ಇದೀಗ ಕೊರೊನಾ ನಿಯಾಮಾವಳಿಗಳು ಬಹುತೇಕ ರದ್ದುಗೊಂಡಿದ್ದು, ಜನಜೀವನ ಎಂದಿನಂತೆ ಆರಂಭವಾಗುತ್ತಿದೆ. ದೇವಸ್ಥಾನಕ್ಕೆ ಬರುತ್ತಿರುವ ಭಕ್ತರ ಸಂಖ್ಯೆಯೂ ಹೆಚ್ಚಾಗಿದ್ದು ಆದಾಯದಲ್ಲೂ ಏರಿಕೆ ಕಂಡಿದೆ. ದೇವಸ್ಥಾನದ ಆದಾಯದಲ್ಲಿ ಹಿಂದೆಂದಿಗಿಂತಲೂ ಈ ಬಾರಿ ಹೆಚ್ಚಿನ ಕಾಣಿಕೆ ಹಣ ಸಂಗ್ರಹವಾಗಿದೆ.

Comments

Leave a Reply

Your email address will not be published. Required fields are marked *