ಮಹಾಲಯ ಅಮವಾಸ್ಯೆ ಎಫೆಕ್ಟ್ – ದಸರಾ ಗಜಪಡೆ ತಾಲೀಮು ರದ್ದು

ಮೈಸೂರು: ದಸರಾ ಪ್ರಯುಕ್ತ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಆನೆಗಳಿಗೆ ತಾಲೀಮು ನಡೆಯುತ್ತಿತ್ತು. ಆದರೆ ಇಂದು ಮಹಾಲಯ ಅಮವಾಸ್ಯೆಯ ಹಿನ್ನೆಲೆಯಲ್ಲಿ ಗಜಪಡೆಯ ತಾಲೀಮು ರದ್ದಾಗಿದೆ.

ಅರಮನೆ ಆವರಣದ ಒಳಗೆಯೇ ಆನೆಗಳು ವಿಶ್ರಾಂತಿ ಪಡೆಯುತ್ತಿವೆ. ಅರಮನೆ ಆವರಣದ ಒಳಗೆ ಒಂದೆರಡು ಸುತ್ತು ವಾಕಿಂಗ್ ಮಾಡಿದ ಗಜಪಡೆ ನಂತರ ವಿಶ್ರಾಂತಿಗೆ ಜಾರಿವೆ. ಅಮವಾಸ್ಯೆ ಆಗಿರುವ ಕಾರಣ ಅರಮನೆ ಆವರಣದಿಂದ ಆನೆಗಳನ್ನು ಹೊರಕ್ಕೆ ಕರೆದೊಯ್ದರೆ ಏನಾದರೂ ಅನಾಹುತ ಆಗಬಹುದೆಂಬ ಭಯ ಆನೆಯ ಮಾವುತರು ಮತ್ತು ಕಾವಾಡಿಗಳದ್ದು. ಈ ಹಿನ್ನೆಲೆಯಲ್ಲಿ ಅರಮನೆಯ ಆವರಣದಲ್ಲೇ ಗಜಪಡೆಗೆ ತಾಲೀಮು ನೀಡಲಾಯಿತು. ಕಳೆದ ಅಮಾವಾಸ್ಯೆಯಂದು ಕೂಡ ದಸರಾ ಗಜಪಡೆಯ ತಾಲೀಮನ್ನು ಅರಮನೆ ಆವರಣಕ್ಕೆ ಸೀಮಿತಗೊಳಿಸಲಾಗಿತ್ತು.

ಪ್ರತಿದಿನ ಅರಮನೆಯಿಂದ ಕೆ.ಆರ್ ವೃತ್ತ ಸಯ್ಯಾಜಿರಾವ್ ರಸ್ತೆ ತಿಲಕ್‍ನಗರ ಬಂಬೂಬಜಾರ್, ಹೈವೇ ವೃತ್ತದ ಮೂಲಕ ಬನ್ನಿಮಂಟಪ ತಲುಪುತ್ತಿದ್ದವು. ಬಳಿಕ ಅದೇ ಮಾರ್ಗವಾಗಿ ಆನೆಗಳು ಮೈಸೂರು ಅರಮನೆಗೆ ವಾಪಸ್ಸಾಗುತ್ತಿದ್ದವು. ಆದರೆ ಇಂದು ಅಮಾವಾಸ್ಯೆಯಾಗಿದ್ದರಿಂದ ತಾಲೀಮು ನಡೆಯುತ್ತಿಲ್ಲ. ಪ್ರತಿ ಅಮಾವಾಸ್ಯೆಯ ಸಮಯದಲ್ಲಿ ಆನೆಗಳಿಗೆ ತಾಲೀಮು ನಡೆಸುವುದಿಲ್ಲ.

ತಾಲೀಮು ಏಕೆ?
ಆನೆಗಳಿಗೆ ಜನರ ಗದ್ದಲ, ವಾಹನಗಳ ಧ್ವನಿ ಮತ್ತು ರಸ್ತೆಯ ಪರಿಚಯ ಮಾಡುವ ಉದ್ದೇಶದಿಂದ ಈ ತಾಲೀಮು ಮಾಡಿಸಲಾಗುತ್ತದೆ. ಅಲ್ಲದೆ ಕಾಡಿನಲ್ಲಿ ಓಡಾಡುವ ಆನೆಗಳು ಸಿಮೆಂಟ್ ಹಾಗೂ ಕಾಂಕ್ರಿಟ್ ರಸ್ತೆ ಮೇಲೆ ನಡೆಯುವುದನ್ನು ಅಭ್ಯಾಸ ಮಾಡಿಸುವುದು ಈ ತಾಲೀಮಿನ ಉದ್ದೇಶವಾಗಿದೆ. ತಾಲೀಮು ಮುಗಿದ ನಂತರ ಆನೆಗಳಿಗೆ ಪೌಷ್ಠಿಕ ಆಹಾರ ನೀಡಿ ಅವು ಸದೃಢವಾಗಿರುವಂತೆ ನೋಡಿಕೊಳ್ಳಲಾಗುತ್ತದೆ. ಯಾವುದೇ ಹಂತದಲ್ಲೂ ಆನೆಗಳು ಸಿಮೆಂಟ್ ಹಾಗೂ ಕಾಂಕ್ರಿಟ್ ರಸ್ತೆ ಮೇಲೆ ಸಾಗಿ ಸುಸ್ತಾಗದಂತೆ ನೋಡಿಕೊಳ್ಳುವುದು ಅತಿ ಮುಖ್ಯವಾಗಿದೆ ಎಂದು ಆನೆ ವೈದ್ಯರಾದ ಡಾ. ನಾಗರಾಜ್ ಹೇಳಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *