ಅಸ್ಥಿರತೆ, ಭ್ರಷ್ಟಾಚಾರ, ವಂಚನೆಗೈದವರ ಕೂಟವೇ ಮಹಾಮೈತ್ರಿ – ಮೋದಿ ತಿರುಗೇಟು

ಗಾಂಧೀನಗರ: ಮಹಾಘಟಬಂಧನ್ ಭ್ರಷ್ಟಾಚಾರ, ವಂಚನೆ, ಋಣಾತ್ಮಕತೆ ಹಾಗೂ ಅಸ್ಥಿರತೆಯಿಂದ ಆಗಿರುವ ಕೂಟ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಗುಜರಾತ್‍ನ ಸಿಲ್ವಾಸ್‍ನಲ್ಲಿ ನಡೆದ ಸಭೆಯಲ್ಲಿ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಬಡವರ ಪಡಿತರ, ಪಿಂಚಣಿಯನ್ನು ತಿಂದ ಪಕ್ಷ (ಕಾಂಗ್ರೆಸ್) ಜೊತೆಗೆ ಸೇರಿ ಕೆಲವು ಪಕ್ಷಗಳು ಮಹಾಘಟಬಂಧನ್ ರೂಪಿಸುತ್ತಿವೆ. ಆದರೆ ಬಿಜೆಪಿ ದೇಶದ 125 ಕೋಟಿ ಜನರೊಂದಿಗೆ ಮೈತ್ರಿ ಮಾಡಿಕೊಂಡಿದೆ ಎಂದು ತಿರುಗೇಟು ನೀಡಿದರು.

ಕೋಲ್ಕತ್ತಾದಲ್ಲಿ ನಡೆದ ಮಹಘಟಬಂಧನ್ ಭಹಿರಂಗ ಸಭೆಯಲ್ಲಿ ಸೇರಿದ್ದ ಪ್ರಭಾವಿ ರಾಜಕಾರಣಿಗಳು ತಮ್ಮ ಮಕ್ಕಳನ್ನು ಅಧಿಕಾರಕ್ಕೆ ತರಲು ಹಾತೊರೆಯುತ್ತಿದ್ದಾರೆ ಎಂದು ಪರೋಕ್ಷವಾಗಿ ಮಾಜಿ ಪ್ರಧಾನಿ ದೇವೇಗೌಡ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

ಕಾಂಗ್ರೆಸ್ ಯಾವುದೇ ಪಕ್ಷದ ಜೊತೆಗೆ ಸೇರಿ ಮಹಾಘಟಬಂಧನ್ ಮಾಡಿಕೊಂಡರೂ ಅದರ ಕರ್ಮ ಕಳೆಯುವುದಿಲ್ಲ. ಮಹಾಮೈತ್ರಿಯ ನಾಯಕರಿಗೆ `ಧನಬಲ’ವಿದೆ. ಆದರೆ ನಮಗೆ `ಜನಬಲ’ವಿದೆ ಎಂದ ಅವರು, ಇದರಲ್ಲಿ ಯಾವುದು ಗೆಲ್ಲುತ್ತದೆ ಎಂದು ಸಭೆಯಲ್ಲಿ ಸೇರಿದ್ದ ಜನರಿಗೆ ಕೇಳಿದರು.

ಇವಿಎಂ ಯಂತ್ರಗಳಲ್ಲಿ ದೋಷವಿದೆ ಎಂದು ನ್ಯಾಷನಲ್ ಕಾಂಗ್ರೆಸ್ ಅಧ್ಯಕ್ಷ ಫಾರುಕ್ ಅಬ್ದುಲ್ಲ ಆರೋಪಿಸಿದ್ದಾರೆ. ಇಂತಹ ಹೇಳಿಕೆ ಮೂಲಕ ದೇಶದ ಜನತೆಯ ದಾರಿ ತಪ್ಪಿಸುತ್ತಿದ್ದಾರೆ. ನಾನು ದೇಶದ ಜನರ ಕಲ್ಯಾಣಕ್ಕೆ ಶ್ರಮಿಸುತ್ತಿರುವೆ. 2020ರ ವೇಳೆಗೆ ಭಾರತವನ್ನು ವಿಶ್ವದ ಶ್ರೇಷ್ಠ ದೇಶವನ್ನಾಗಿ ಮಾಡುವ ಕನಸು ಕಂಡಿರುವೆ ಎಂದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *