ಅಮ್ಮನ ಕೊಲೆ ರಹಸ್ಯ ಬಿಚ್ಚಿಟ್ಟ 3 ವರ್ಷದ ಕಂದಮ್ಮ!

ಮಡಿಕೇರಿ: ಕೊಡಗು ಜಿಲ್ಲೆಯ ಕಡಂಗ ಗ್ರಾಮದಲ್ಲಿ ಏಪ್ರಿಲ್ 18ರಂದು ಗೃಹಿಣಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅಮ್ಮನನ್ನು ಕೊಲೆ ಮಾಡಿದ್ದಾರೆ ಎಂದು ಮೂರು ವರ್ಷದ ಕಂದಮ್ಮ ತನ್ನದೇ ಭಾಷೆಯಲ್ಲಿ ಹೇಳುತ್ತಿದ್ದು, ಇದೀಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಬೆಂಗಳೂರಲ್ಲಿ ಡ್ರೈವರ್ ಆಗಿದ್ದ ಗ್ರಾಮದ ಚೇತನ್, 4 ವರ್ಷದ ಹಿಂದೆ ಮಂಡ್ಯ ಮೂಲದ ಪ್ರಮೀಳಾರನ್ನು ಪ್ರೀತಿಸಿ ಮದುವೆಯಾಗಿದ್ದನು. ಈ ದಂಪತಿಗೆ ಒಂದು ಗಂಡು ಮಗುವೂ ಹುಟ್ಟಿತ್ತು. ಆದರೆ ಚೇತನ್ ದಿನಗಳೆದಂತೆ ಟೀಚರ್ ಒಬ್ಬರ ಸಹವಾಸ ಮಾಡಿದ್ದನು. ಈ ವಿಚಾರ ತಿಳಿದ ಪತ್ನಿ ಪ್ರಮೀಳಾ ಟೀಚರ್‍ಗೆ ಫೋನ್ ಮಾಡಿ ಕ್ಲಾಸ್ ತೆಗೆದುಕೊಂಡಿದ್ದರು.

ಆದರೂ ಪತಿ ಟೀಚರಮ್ಮನ ಸಹವಾಸ ಬಿಟ್ಟಿರಲಿಲ್ಲ. ಕಳೆದ ಏಪ್ರಿಲ್ 18ರಂದು ಬೆಂಗಳೂರಲ್ಲಿದ್ದ ಪತಿ ಚೇತನ್ ವೋಟ್ ಹಾಕಲು ಊರಿಗೆ ಬಂದಿದ್ದನು. ಅಂದು ಪತ್ನಿ ಪ್ರಮೀಳಾ ಕೂಡ ವೋಟ್ ಹಾಕಿ ಬಂದು ಮಗು ಜೊತೆ ಮನೆಯಲ್ಲಿದ್ದರು. ಅಂದೇ ಪ್ರಮೀಳಾ ಮೃತದೇಹ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಸಿಕ್ಕಿದೆ.

ಚೇತನ್ ಮನೆಯಲ್ಲೇ ಇರಲಿಲ್ಲ ಎಂದು ಮನೆಯವರು ಹೇಳಿದ್ರೆ, ಚೇತನ್ ಮನೆಯೊಳಗೆ ಹೋಗಿರುವ ದೃಶ್ಯ ಮನೆ ಮುಂಭಾಗದ ರಸ್ತೆಯ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ಮಗಳನ್ನು ಹೊಡೆದು ಕೊಲೆ ಮಾಡಿ ನೇತು ಹಾಕಿದ್ದಾರೆ ಎಂದು ಹೆತ್ತವರು ಆರೋಪಿಸಿದ್ದಾರೆ.

ಆದರೆ ದಂಪತಿಯ 3 ವರ್ಷದ ಮಗು ಮಾತ್ರ ಅಮ್ಮನನ್ನು ಕೊಲೆ ಮಾಡಲಾಗಿದೆ ಎಂದು ತನ್ನದೇ ಭಾಷೆಯಲ್ಲಿ ಸಾಕ್ಷಿ ಹೇಳುತ್ತಿದೆ. ಇತ್ತ ಹೆಂಡತಿ ಸತ್ತ ದಿನ ಸ್ಟೇಷನ್ ಹೋದ ಚೇತನ್ ಕಣ್ಮರೆಯಾಗಿದ್ದಾನೆ. ಪೊಲೀಸರಿಗೆ ದೂರು ಕೊಟ್ಟರೂ ಸ್ವೀಕರಿಸುತ್ತಿಲ್ಲ. 3 ವರ್ಷದ ಮಗು ಸಾಕ್ಷಿ ಹೇಳ್ತಿದ್ರೂ ಪೊಲೀಸರು ನಂಬುತ್ತಿಲ್ಲ. ಹೀಗಾಗಿ ಪ್ರಕರಣ ಸಂಬಂಧ ನಿಷ್ಪಕ್ಷಪಾತ ತನಿಖೆ ನಡೆಯಲಿ ಎಂದು ಮಹಿಳಾ ಸಂಘಟನೆಗಳು ಒತ್ತಾಯಿಸುತ್ತಿವೆ.

 

Comments

Leave a Reply

Your email address will not be published. Required fields are marked *