ಕರೆನ್ಸಿ ಹಾಕಿಸಲು ಬಂದವ್ರು ಪೊಲೀಸರ ವಶವಾದ್ರು

ಮಡಿಕೇರಿ: ಖೋಟಾ ನೋಟಿನ ಜಾಲವೊಂದನ್ನು ಬೇಧಿಸುವಲ್ಲಿ ಮಡಿಕೇರಿ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಇಬ್ಬರು ಆರೋಪಿಗಳನ್ನು ಬಂಧಿಸಿ 2 ಸಾವಿರ ಮುಖ ಬೆಲೆಯ 5 ಖೋಟಾ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಮಡಿಕೇರಿ ತಾಲೂಕಿನ ಕುಲಂಜಿ ನಿವಾಸಿ ಅಮೀರ್ ಸೋಹೈಲ್ (20) ಹಾಗೂ ವಿರಾಜಪೇಟೆ ತಾಲೂಕಿನ ನಾಲ್ಕೇರಿ ಗ್ರಾಮದ ನಿವಾಸಿ ಯು.ವೈ ಯೂನೀಸ್ (20) ಮತ್ತೊಬ್ಬ ಅಪ್ರಾಪ್ತ ಬಾಲಕ ಸೇರಿದಂತೆ ಮೂವರು ಖೋಟಾ ನೋಟು ತಯಾರಿಸುವ ಜಾಲದಲ್ಲಿ ಸಕ್ರಿಯರಾಗಿದ್ದರು ಎನ್ನಲಾಗಿದೆ.

ಸೆಪ್ಟೆಂಬರ್ 10 ರ ಸಂಜೆ 4 ಗಂಟೆ ಸುಮಾರಿಗೆ ಮಡಿಕೇರಿ ಕಾಲೇಜು ರಸ್ತೆಯಲ್ಲಿರುವ ಅರುಣ್ ಮಾರ್ಕೆಟಿಂಗ್ ಕರೆನ್ಸಿ ಸೆಂಟರ್ ಗೆ ಆರೋಪಿ ಅಮೀರ್ ಸೋಹೈಲ್ ನಕಲಿ ನೋಟು ಕೊಟ್ಟು ಕರೆನ್ಸಿ ಹಾಕುವಂತೆ ಅಂಗಡಿ ಮಾಲೀಕ ಮುಕುಂದ ಅವರಿಗೆ ಕೊಟ್ಟಿದ್ದಾನೆ. ನೋಟನ್ನು ಗಮನಿಸಿ ಸಂಶಯಗೊಂಡ ಅಂಗಡಿ ಮಾಲೀಕ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಮಾಹಿತಿ ಆಧರಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್ ನೇತೃತ್ವದಲ್ಲಿ ಮಡಿಕೇರಿ ಉಪ ವಿಭಾಗದ ಡಿವೈಎಸ್‍ಪಿ ಬಿ.ಪಿ.ದಿನೇಶ್ ಕುಮಾರ್, ಮಡಿಕೇರಿ ನಗರ ಠಾಣೆಯ ಇನ್‍ಸ್ಪೆಕ್ಟರ್ ಅನೂಪ್ ಮಾದಪ್ಪ ಹಾಗೂ ಸಬ್‍ಇನ್‍ಸ್ಪೆಕ್ಟರ್ ಸದಾಶಿವ ನೇತೃತ್ವದ ಸಿಬ್ಬಂದಿ ತಂಡ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದೆ.

Comments

Leave a Reply

Your email address will not be published. Required fields are marked *