ವಿದ್ಯುತ್ ಲೈನ್ ಕಟ್ ಮಾಡಿದ ಸಿಬ್ಬಂದಿ ಕೈ ಮುರಿದ ಅಪ್ಪ, ಮಗ

ಮಡಿಕೇರಿ: ಬಿಲ್ ಬಾಕಿ ಇರಿಸಿದ್ದ ಹಿನ್ನೆಲೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಲೈನ್ ಮ್ಯಾನ್ ಮೇಲೆ ಅಪ್ಪ, ಮಗ ಹಲ್ಲೆ ನಡೆಸಿ, ಸಿಬ್ಬಂದಿ ಕೈ ಮುರಿದ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಗ್ರಾಮದಲ್ಲಿ ನಡೆದಿದೆ.

ಅಮ್ಮತ್ತಿ ಗ್ರಾಮದಲ್ಲಿ ಲೈನ್ ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ನಿವಾಸಿ ಈರಪ್ಪ ಅವರ ಮೇಲೆ ಹಲ್ಲೆ ಮಾಡಲಾಗಿದೆ. ಸೋಮವಾರ ಈರಪ್ಪ ಅಮ್ಮತ್ತಿ ಗ್ರಾಮದ ನಿವಾಸಿ ಬಿ.ಎಸ್ ಅಮಾನುಲ್ಲಾ ಖಾನ್ ಮನೆಗೆ ಹೋಗಿ ಬಿಲ್ ಬಾಕಿ ಇರಿಸಿಕೊಂಡಿದಕ್ಕೆ ವಿದ್ಯುತ್ ಕಡಿತಗೊಳಿಸಿದ್ದರು. ಅಮಾನುಲ್ಲಾ ಖಾನ್ ಅವರು ವಿದ್ಯುತ್ ಬಿಲ್‍ನಲ್ಲಿ 22,612 ರೂ. ಬಾಕಿ ಉಳಿಸಿಕೊಂಡಿದ್ದರು. ಆದ್ದರಿಂದ ಇಲಾಖೆಯ ಆದೇಶದಂತೆ ಸೋಮವಾರ ಮಧ್ಯಾಹ್ನ 3 ಗಂಟೆಗೆ ಖಾನ್ ಅವರ ಮನೆಗೆ ಬರುವ ವಿದ್ಯುತ್ ಸಂಪರ್ಕವನ್ನು ಲೈನ್ ಮ್ಯಾನ್ ಕಡಿತಗೊಳಿಸಿದ್ದರು.

ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿರುವ ವಿಚಾರ ತಿಳಿದ ಅಮಾನುಲ್ಲಾ ಖಾನ್ ಹಾಗೂ ಪುತ್ರ ಜೀಯಾ ಉಲ್ಲಾ ಖಾನ್ ಕರ್ತವ್ಯ ನಿರತರಾಗಿದ್ದ ಈರಪ್ಪ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಪರಿಣಾಮ ಈರಪ್ಪ ಅವರ ಎಡಗೈ ಮೂಳೆ ಮುರಿದಿದೆ. ಹಲ್ಲೆಯಿಂದ ತೀವ್ರ ಗಾಯಗೊಂಡ ಈರಪ್ಪ ಅವರನ್ನು ಅಮ್ಮತ್ತಿ ಗ್ರಾಮದ ಆರ್‌ಐಹೆಚ್‌ಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಭಂದಿಸಿದಂತೆ ಅಮ್ಮತ್ತಿ ಪೋಲಿಸರಿಗೆ ದೂರು ನೀಡಲಾಗಿದ್ದು, ಕರ್ತವ್ಯ ನಿರತ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯ ಮೇಲೆ ಕ್ರಮ ಜರುಗಿಸುವಂತೆ ಇಲಾಖೆಯ ಸಿಬ್ಬಂದಿ ಒತ್ತಾಯಿಸಿದ್ದಾರೆ.

Comments

Leave a Reply

Your email address will not be published. Required fields are marked *