ಬಲವಂತ ವಿವಾಹಕ್ಕೆ ಅಪ್ಪನ ವಿರುದ್ಧವೇ ದೂರು ದಾಖಲಿಸಿದ ಬಿಜೆಪಿ ಮಾಜಿ ಶಾಸಕನ ಪುತ್ರಿ

ಭೋಪಾಲ್: ಬಲವಂತವಾಗಿ ವಿವಾಹ ಮಾಡಿಸಲು ಮುಂದಾದ ತಂದೆ ವಿರುದ್ಧವೇ ಬಿಜೆಪಿ ಮಾಜಿ ಶಾಸಕರ ಪುತ್ರಿ ದೂರು ದಾಖಲಿಸಿದ ಘಟನೆ ಮಧ್ಯಪ್ರದೇಶದ ಭೋಪಾಲ್‍ನಲ್ಲಿ ನಡೆದಿದೆ.

ಭೋಪಾಲ್ ಕೇಂದ್ರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸುರೇಂದ್ರ ನಾಥ್ ಸಿಂಗ್, ರಾಜಕಾರಣಿಯೊಬ್ಬರ ಮಗನೊಂದಿಗೆ ವಿವಾಹವಾಗುವಂತೆ ತಮ್ಮ ಪುತ್ರಿ ಭಾರತಿ ಸಿಂಗ್ ಅವರಿಗೆ ಕಿರುಕುಳ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ಡ್ರಗ್ಸ್ ಇಂಜೆಕ್ಷನ್‍ಗಳನ್ನು ನೀಡಿ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ.

ನಾನು ಮಾನಸಿಕವಾಗಿ ಸದೃಢವಾಗಿರುವೆ. ಆದರೆ ನನ್ನ ಕುಟುಂಬದವರು ನಾನು ಮಾನಸಿಕವಾಗಿ ಅಸ್ವಸ್ಥಳಾಗಿರುವೆ ಎಂದು ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಯಾವುದೇ ಕಾರಣಕ್ಕೂ ಮನೆಗೆ ವಾಪಸ್ ಹೋಗುವುದಿಲ್ಲ. ಮನೆಯಲ್ಲಿ ಸೋದರ ಸಂಬಂಧಿ ನನಗೆ ಹಿಗ್ಗಾಮುಗ್ಗಾ ಥಳಿಸುತ್ತಾಳೆ ಎಂದು ಭಾರತಿ ಸಿಂಗ್ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಸಂಬಂಧ ಭಾರತಿ ಸಿಂಗ್ ಆಪ್ತ ಅಂಕಿತ್ ಸಕ್ಸೇನಾ ಪ್ರತಿಕ್ರಿಯಿಸಿ, ಭಾರತಿ ಕಳೆದ ಕೆಲವು ದಿನಗಳಲ್ಲಿ ಸುಮಾರು 10ರಿಂದ 20 ಬಾರಿ ಮನೆ ಬಿಟ್ಟು ಬಂದಿದ್ದಾಳೆ. ಅಷ್ಟೇ ಅಲ್ಲದೆ ಅವಳ ಕೋರಿಕೆ ಮೇರೆಗೆ ಆಕೆಯ ಮೇಲೆ ನಡೆಯುತ್ತಿದ್ದ ಹಲ್ಲೆಯನ್ನು ವಿಡಿಯೋ ಮಾಡಿದ್ದೇನೆ. ಭಾರತಿ ಸಿಂಗ್‍ಗೆ ರಕ್ಷಣೆ ನೀಡುವಂತೆ ಕೋರ್ಟ್ ಗೆ ಮನವಿ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.

ಭಾರತಿ ಸಿಂಗ್ ನೆರೆ ರಾಜ್ಯ ಮಹಾರಾಷ್ಟ್ರದ ಯುವಕನನ್ನು ಪ್ರೀತಿಸುತ್ತಿದ್ದಾಳೆ. ಇಬ್ಬರು ಮದುವೆಯಾಗಲು ನಿರ್ಧರಿಸಿದ್ದಾರೆ. ಆದರೆ ಭಾರತಿ ತಂದೆ ಮಾಜಿ ಶಾಸಕ ಸುರೇಂದ್ರ ನಾಥ್ ಸಿಂಗ್ ವಿರೋಧ ವ್ಯಕ್ತಪಡಿಸಿದ್ದಾರೆ. ಜೊತೆಗೆ ಬಿಜೆಪಿ ಮುಂಖಡರೊಬ್ಬರ ಮಗನೊಂದಿಗೆ ಮದುವೆ ಮಾಡಲು ಮುಂದಾಗಿದ್ದಾರೆ ಎಂದು ಅಂಕಿತ್ ದೂರಿದರು.

ಭಾರತಿ ಸಿಂಗ್ ಪರ ವಕೀಲ ಪ್ರತಿಕ್ರಿಯಿಸಿ, ನನ್ನ ಕಕ್ಷಿದಾರರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ್ದಾರೆ. ಅವರು ಮಾನಸಿಕ ಅಸ್ವಸ್ಥರಲ್ಲ ಎಂದು ತಿಳಿಸಿದರು.

ಮಾಜಿ ಶಾಸಕ ಸುರೇಂದ್ರ ನಾಥ್ ಸಿಂಗ್, ತಮ್ಮ ಪುತ್ರಿ ಕಾಣೆಯಾಗಿದ್ದಾಳೆ. ಆಕೆ ಮಾನಸಿಕ ಅಸ್ವಸ್ಥೆಯಾಗಿದ್ದು, ಆದಷ್ಟು ಬೇಗ ಪತ್ತೆ ಹಚ್ಚುವಂತೆ ಭೋಪಾಲ್‍ನ ಕಮಲಾ ನಗರದ ಪೊಲೀಸ್ ಠಾಣೆಗೆ ಅಕ್ಟೋಬರ್ 16ರಂದು ದೂರು ನೀಡಿದ್ದರು.

Comments

Leave a Reply

Your email address will not be published. Required fields are marked *