ಉದ್ವಿಗ್ನ ಪರಿಸ್ಥಿತಿಯಿಂದ ಕರ್ನಾಟಕಕ್ಕೆ ಬರಲು ಕೈಗಾರಿಕೋದ್ಯಮಿಗಳು ಹೆದರುತ್ತಿದ್ದಾರೆ: ಎಂ.ಬಿ.ಪಾಟೀಲ್‌

ವಿಜಯಪುರ: ಬೆಂಗಳೂರಿನಲ್ಲಿ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್‌ ವಾಗ್ದಾಳಿ ನಡೆಸಿದ್ದಾರೆ.

ಗೃಹ ಸಚಿವರ ಹೇಳಿಕೆ ಅತಿರೇಕದಿಂದ ಕೂಡಿದೆ. ಮತಗಳ ಆಸೆ ಹಾಗೂ ಮತ ಕ್ರೋಢೀಕರಣಕ್ಕಾಗಿ ಹೀಗೆ ಹೇಳಿದ್ದಾರೆ. ಒಂದಾದ ಮೇಲೆ ಒಂದು ವಿವಾದ ಮಾಡುತ್ತಿದ್ದಾರೆ. ಹಿಜಬ್, ಕಾಶ್ಮೀರಿ ಫೈಲ್ಸ್ ವಿಚಾರ, ಜಾತ್ರೆಗಳಲ್ಲಿ ಮುಸ್ಲಿಂ ವರ್ತಕರಿಗೆ ನಿರ್ಬಂಧ, ಹಲಾಲ್, ಆಜಾನ್ ವಿವಾದ ಮಾಡಲಾಗುತ್ತಿದೆ. ಮುಂದೆ ಇದು ಅವರಿಗೇ ತಿರುಗುಬಾಣವಾಗಲಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಕಾಲ ಕಾಲಕ್ಕೆ ಸತ್ಯ ಹೇಳುವ ಟೀಂ ಇಟ್ಕೋಬೇಕು: ಸಿಟಿ ರವಿ ವಾಗ್ದಾಳಿ

ಇದರಿಂದ ರಾಜ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಕೈಗಾರಿಕೆಗಳು, ಕೈಗಾರಿಕಾ ಉದ್ಯಮಿಗಳು ಇಲ್ಲಿ ಬರಲು ಹಿಂಜರಿಯುತ್ತಿದ್ದಾರೆ. ಈ ಕಾರಣದಿಂದ ಇಂಡಸ್ಟ್ರಿಗಳು ‌ಬೆಳೆಯಲ್ಲಾ. ಇಂಥ ವಿವಾದಗಳ ಕಾರಣದಿಂದಲೇ ಹೈದರಾಬಾದ್‌, ಬೆಳಗಾವಿಗೆ ಕೈಗಾರಿಕೆಗಳು‌ ಹಾಗೂ ಕೈಗಾರಿಕಾ ಉದ್ಯಮಿಗಳು ಹೋಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಇಂಥ ವಿವಾದಗಳನ್ನು ಸಾಮರಸ್ಯದಿಂದ ಬಗೆಹರಿಸಬೇಕು. ನಮ್ಮ ನಾಡಿನಲ್ಲಿ ಸಂತರು, ಮಹಾತ್ಮರು ನಡೆದಾಡಿದ್ದಾರೆ. ಈ ಎಲ್ಲಾ ವಿವಾದಗಳ ಕುರಿತು ವಿಚಾರ ಮಾಡಬೇಕು. ಕೋಮು ಸೌಹಾರ್ದತೆಯನ್ನು ಕೆಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಧಿವೇಶನ ಮುಂದೂಡಲು ಸಂಸದರೇ ಮನವಿ ಮಾಡಿದ್ದರು: ಪ್ರಹ್ಲಾದ್ ಜೋಶಿ

ಬದುಕನ್ನು ಕಟ್ಟೋ ಕೆಲಸವಾಗಬೇಕು. ರಾಜ್ಯ ಸರ್ಕಾರದಲ್ಲಿ‌ ಅಭಿವೃದ್ಧಿ ಇಲ್ಲ, ಹಣವಿಲ್ಲ, ಹಸಿದವರಿಗೆ ಅನ್ನ‌ ಇಲ್ಲ. ಇವೆಲ್ಲ ಸಮಸ್ಯೆಗಳನ್ನು ಮುಚ್ಚಿಕೊಳ್ಳೋಕೆ ಹೀಗೆ ಮಾಡುತ್ತಿದ್ದಾರೆ. ಶ್ರೀಲಂಕಾದಂತೆ ಭಾರತ ಆಗಬಾರದು ಎಂದು ಹೇಳಿದ್ದಾರೆ.

ಸರ್ಕಾರ ಸಾಲದ ಸುಳಿಯಲ್ಲಿದೆ. ಐದು ಲಕ್ಷ ಕೋಟಿ ರೂಪಾಯಿ ಸಾಲವಿದೆ. ಎಲ್ಲಾ ಇಲಾಖೆಯಲ್ಲೂ ಶೇ. 40 ರಷ್ಟು ಹುದ್ದೆಗಳು‌ ಖಾಲಿ ಇವೆ. ಅವನ್ನು ಭರ್ತಿ ಮಾಡಿಲ್ಲ. ಜನ ಬೇಸತ್ತಿದ್ದಾರೆ. ಮತಕ್ಕಾಗಿ‌ ಹೀಗೆಲ್ಲಾ ಮಾಡುತ್ತಿದ್ದಾರೆ ಎಂದು ಗೊತ್ತಾಗಿದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

Comments

Leave a Reply

Your email address will not be published. Required fields are marked *