ಐಟಿ ಅಧಿಕಾರಿಗಳಿಗೆ ಶರಣಾಗಿ, 60 ಲಕ್ಷ ಮೌಲ್ಯದ ಆಸ್ತಿ ಒಪ್ಪಿಸಿದ ಪಕೋಡವಾಲಾ!

ಸಾಂದರ್ಭಿಕ ಚಿತ್ರ

ಚಂಡೀಗಡ: ಪಂಜಾಬ್ ರಾಜ್ಯದ ಲೂಧಿಯಾನದ ಪ್ರಸಿದ್ಧ ಪಕೋಡಾ ವ್ಯಾಪಾರಿಯ ಮೇಲೆ ಆದಾಯ ತೆರಿಗೆ(ಐಟಿ) ಅಧಿಕಾರಿಗಳು ದಾಳಿ ಮಾಡುತ್ತಲೇ ನಾಪತ್ತೆಯಾಗಿದ್ದ ವ್ಯಾಪಾರಿಯೊಬ್ಬ ನಂತರ ಶರಣಾಗಿ 60 ಲಕ್ಷ ರೂಪಾಯಿ ಮೌಲ್ಯದ ಆಸ್ತಿಯನ್ನು ಒಪ್ಪಿಸಿದ್ದಾನೆ.

ಹೌದು, ಪ್ರಧಾನಿ ನರೇಂದ್ರ ಮೋದಿಯವರು ಪಕೋಡ ಮಾರುವುದು ಕೂಡ ಒಂದು ಉದ್ಯೋಗ ಎಂದು ಹೇಳಿಕೆ ನೀಡಿದ್ದನ್ನು ವಿರೋಧ ಪಕ್ಷಗಳು ಟೀಕಿಸಿದ್ದವು. ಇದರ ಬೆನ್ನಲ್ಲೇ ಲೂಧಿಯಾನದ ಪ್ರಸಿದ್ಧ ಪಕೋಡಾ ಮಳಿಗೆ ಮೇಲೆ ಆದಾಯ ತೆರಿಗೆ ಇಲಾಖೆ ಗುರುವಾರ ದಾಳಿ ನಡೆಸಿತ್ತು.

ದಾಳಿ ವೇಳೆ ಖ್ಯಾತ ಪಕೋಡ ಮಾರಾಟಗಾರ ಪನ್ನಾ ಸಿಂಗ್ ನಾಪತ್ತೆಯಾಗಿದ್ದ. ಈ ವೇಳೆ ಅಧಿಕಾರಿಗಳು ಪನ್ನಾ ಸಿಂಗ್‍ರ ಅಂಗಡಿ ಹಾಗೂ ಮನೆ ಮೇಲೆ ದಾಳಿ ನಡೆಸಿ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ದಾಳಿ ಬೆನ್ನಲ್ಲೇ ಶುಕ್ರವಾರ ಪನ್ನಾ ಸಿಂಗ್ ಪಂಜಾಬ್‍ನ ಆದಾಯ ತೆರಿಗೆ ಇಲಾಖೆಗೆ ಶರಣಾಗಿ 60 ಲಕ್ಷ ರೂಪಾಯಿ ಮೌಲ್ಯದ ಆಸ್ತಿಯನ್ನು ಆದಾಯ ತೆರಿಗೆ ಇಲಾಖೆಗೆ ಒಪ್ಪಿಸಿದ್ದಾನೆ.

1952 ರಿಂದಲೂ ಪನ್ನಾ ಸಿಂಗ್ ಲೂಧಿಯಾನದ ಗಿಲ್ ರಸ್ತೆಯಲ್ಲಿ ಪಕೋಡಾ ವ್ಯಾಪಾರವನ್ನು ಮಾಡಿಕೊಂಡು ಬರುತ್ತಿದ್ದ. ಅಲ್ಲದೇ ಪನ್ನಾ ಸಿಂಗ್ ಕೇವಲ ಪಕೋಡ ವ್ಯಾಪಾರದ ಮೂಲಕ ಐಷಾರಾಮಿ ಮನೆ, ಅಂಗಡಿ ಹಾಗೂ ಅಪಾರ ಪ್ರಮಾಣದ ಆಸ್ತಿಯನ್ನು ಗಳಿಸಿದ್ದರು ಎಂದು ತಿಳಿದು ಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಆಯುಕ್ತ ಡಿ.ಎಸ್.ಚೌದರಿ, ದಶಕಗಳಷ್ಟು ಹಳೆಯದಾಗಿರುವ ಪಕೋಡಾ ಅಂಗಡಿಯು ಇಲ್ಲಿಯವರೆಗೂ ಯಾವುದೇ ಆದಾಯ ತೆರಿಗೆಯನ್ನು ಪಾವತಿ ಮಾಡಿರಲಿಲ್ಲ. ಹೀಗಾಗಿ ಪನ್ನಾ ಸಿಂಗ್‍ರ ಎರಡೂ ಅಂಗಡಿಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದೇವೆ. ದಾಳಿ ವೇಳೆ ಪ್ರತಿದಿನ ಆಗುತ್ತಿದ್ದ ವ್ಯಾಪಾರವನ್ನು ಲೆಕ್ಕಹಾಕಿ ತೆರಿಗೆಯನ್ನು ಸಂಗ್ರಹಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *