ನಮ್ಮನ್ನು ಬದುಕಲು ಬಿಡಿ – ವಿಡಿಯೋ ಮಾಡಿ ಅಂಗಲಾಚಿದ ಪ್ರೇಮಿಗಳು

ಹಾಸನ: ನಮ್ಮನ್ನು ಬದುಕಲು ಬಿಡಿ ಎಂದು ಪ್ರೇಮಿಗಳು ಸೆಲ್ಫಿ ವಿಡಿಯೋ ಮಾಡಿ ಅಂಗಲಾಚಿದ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣದಲ್ಲಿ ನಡೆದಿದೆ.

ಜೀವಿತಾ ಹಾಗೂ ರಾಕೇಶ್ ಒಂದೂವರೆ ವರ್ಷದಿಂದ ಪ್ರೀತಿಸುತ್ತಿದ್ದರು. ಅತ್ತೆಯ ಮಗನ ಜೊತೆ ಮದುವೆ ಮಾಡುತ್ತಾರೆ ಎಂದು ಜೀವಿತಾ ತನ್ನ ಪ್ರೇಮಿ ರಾಕೇಶ್ ಜೊತೆ ಮನೆ ಬಿಟ್ಟು ಓಡಿ ಹೋದರು. ಬಳಿಕ ಪೋಷಕರನ್ನು ವಿರೋಧಿಸಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು.

ಮನೆಯಲ್ಲಿ ಚಿತ್ರ ಹಿಂಸೆಯ ನೀಡುತ್ತಿರುವ ಬಗ್ಗೆ ಜೀವಿತಾ ಸೆಲ್ಫಿ ವಿಡಿಯೋ ಮಾಡಿದ್ದಾಳೆ. ವಿಡಿಯೋದಲ್ಲಿ ಜೀವಿತಾ, ನಾನು ರಾಕೇಶ್‍ನನ್ನು ಪ್ರೀತಿಸುತ್ತಿರುವ ವಿಷಯ ನಮ್ಮ ಮನೆಯಲ್ಲಿ ತಿಳಿಯಿತು. ಬಳಿಕ ನಾನೇ ನನ್ನ ತಂದೆ-ತಾಯಿ ಬಳಿ ಹೋಗಿ ಆತನನ್ನು ಮದುವೆ ಆಗುತ್ತೇನೆ ಎಂದು ಹೇಳಿದೆ. ಮೊದಲು ಅವರು ರಾಕೇಶ್ ಏನು ಕೆಲಸ ಮಾಡುತ್ತಾನೆ ಎಂದು ಕೇಳಿದ್ದಾರೆ. ನಾನು ಲಾರಿ ಡ್ರೈವರ್ ಎಂದಾಗ ಅವರು ನಮ್ಮ ಪ್ರೀತಿಯನ್ನು ಒಪ್ಪಲಿಲ್ಲ. ನನ್ನ ಮೇಲೆ ಹಲ್ಲೆ ಮಾಡಿ ಮನೆಯಲ್ಲಿ ಬಂಧಿಸಿದ್ದರು ಎಂದು ಜೀವಿತಾ ಹೇಳಿದ್ದಾಳೆ.

ಪೋಷಕರು ನನ್ನ ಮೇಲೆ ಹಲ್ಲೆ ಮಾಡಿದಾಗ ಇವರು ನನ್ನನ್ನು ಕೊಲೆ ಮಾಡಬಹುದು ಎಂದು ರಾಕೇಶ್‍ಗೆ ಕರೆ ಮಾಡಿದೆ. ಆಗ ರಾಕೇಶ್ ಪೋಷಕರಿಗೆ ಒಪ್ಪಿಸು ಎಂದು ಹೇಳಿದ. ಆದರೆ ನನ್ನ ಪೋಷಕರು ಮದುವೆಗೆ ಒಪ್ಪುತ್ತಿರಲಿಲ್ಲ. ನಾನು ರಾಕೇಶ್‍ಗೆ ಕರೆ ಮಾಡಿ, ನೀನು ನನ್ನನ್ನು ಕರೆದುಕೊಂಡು ಹೋಗಲಿಲ್ಲ ಎಂದರೆ ನಿನ್ನ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದೆ. ಆಗ ಆತ ನನ್ನನ್ನು ಇಲ್ಲಿಂದ ಕರೆದುಕೊಂಡು ಹೋದನು ಎಂದು ಜೀವಿತಾ ತಿಳಿಸಿದ್ದಾಳೆ.

ಮನೆಯಿಂದ ಓಡಿ ಬಂದ ಮೇಲೆ ನಾವು ಬಸ್ಸಿನಲ್ಲಿಯೇ ತಿರುಗಾಡುತ್ತಿದ್ದೆವು. ನಾವು ಮೊದಲು ಧರ್ಮಸ್ಥಳಕ್ಕೆ ಹೋಗಿದ್ದೆವು. ಅಲ್ಲಿರಲು ನಮಗೆ ಭಯವಾಯಿತು. ಬಳಿಕ ನಾವು ಬೆಂಗಳೂರಿಗೆ ಬಂದು ರಿಜಿಸ್ಟರ್ ಮದುವೆ ಮಾಡಿಕೊಂಡಿದ್ದೇವೆ. ಆದರೆ ನನ್ನ ತಂದೆ, ರಾಕೇಶ್‍ನನ್ನು ಹೊಡೆದು ನನ್ನನ್ನು ಕರೆದುಕೊಂಡು ಹೋಗುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ನಾವು ಈಗ ರಿಜಿಸ್ಟರ್ ಮ್ಯಾರೇಜ್ ಆಗಿದ್ದು, ನಮ್ಮನ್ನು ಬದುಕಲು ಬಿಡಿ ಎಂದು ವಿಡಿಯೋದಲ್ಲಿ ಜೀವಿತಾ ಉಲ್ಲೇಖಿಸಿದ್ದಾಳೆ.

ಈ ಬಗ್ಗೆ ಚನ್ನರಾಯಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *