ಜೊತೆಯಾಗಿ ಸ್ನಾನಕ್ಕೆ ಹೋದವರು ಹೆಣವಾದ್ರು – ಹಸೆಮಣೆ ಏರಬೇಕಿದ್ದ ಜೋಡಿಯ ದುರಂತ ಅಂತ್ಯ

ಬೆಂಗಳೂರು: ಕೆಲವೇ ದಿನಗಳಲ್ಲಿ ಹಸೆಮಣೆ (Marriage) ಏರಬೇಕಿದ್ದ ಪ್ರೇಮಿಗಳು (Lovers) ದಾರುಣವಾಗಿ ಮನೆಯಲ್ಲೇ ಮೃತಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಚಂದ್ರಶೇಖರ್ ಮತ್ತು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕು ಮೂಲದ ಸುಧಾರಾಣಿ ಮೃತ ದುರ್ದೈವಿಗಳು. ಈ ಸಂಬಂಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 
ಏನಿದು ಪ್ರಕರಣ?
ನಂದಿಹಿಲ್ಸ್ ಬಳಿಯ ಗಾಲ್ಪ್ ಹೋಟೆಲಿನಲ್ಲಿ ಜೊತೆಯಾಗಿ ಕೆಲಸ ಮಾಡಿಕೊಂಡಿದ್ದ ಇಬ್ಬರು ಮದುವೆಯಾಗಲು ತಯಾರಿ ನಡೆಸಿದ್ದರು. ತರಬನಹಳ್ಳಿಯಲ್ಲಿ ಮನೆ ಮಾಡಿಕೊಂಡಿದ್ದ ಚಂದ್ರಶೇಖರ್ ನಿವಾಸಕ್ಕೆ ಜೂನ್‌ 10 ರಂದು ಯುವತಿ ಸುಧಾರಾಣಿ ಬಂದಿದ್ದಾಳೆ.  ಇದನ್ನೂ ಓದಿ: ರ‍್ಯಾಂಪ್‌ವಾಕ್‌ ಮಾಡ್ತಿದ್ದಾಗ ಕಬ್ಬಿಣದ ಪಿಲ್ಲರ್‌ ಬಿದ್ದು 24ರ ಮಾಡೆಲ್‌ ದುರ್ಮರಣ

ರಾತ್ರಿ ಇಬ್ಬರು ಒಟ್ಟಿಗೆ ಸ್ನಾನ ಮಾಡಲು ಬಾತ್‌ ರೂಮಿಗೆ (Bath Room) ತೆರಳಿದ್ದರು. ಬಾತ್ ರೂಮಿನ ಕಿಟಕಿ ಹಾಗೂ ಬಾಗಿಲು ಸಂಪೂರ್ಣವಾಗಿ ಲಾಕ್ ಮಾಡಿ ಗ್ಯಾಸ್‌ ಗೀಸರ್‌ (Gas Geyser) ಆನ್‌ ಮಾಡಿದ್ದಾರೆ. ಈ ವೇಳೆ ವಿಷ ಅನಿಲ ಸೋರಿಕೆಯಾಗಿ ಸ್ನಾನ ಮಾಡುತ್ತಲೇ ಪ್ರಜ್ಞೆ ತಪ್ಪಿ ಕುಸಿದು ಬಿದ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

 

ಚಂದ್ರಶೇಖರ್‌ ಮನೆಯಲ್ಲಿ ಇದ್ದರೂ ಭಾನುವಾರ ಬೆಳಗ್ಗೆ ಬಾಗಿಲು ತೆರೆಯದೇ ಇದ್ದಾಗ ಮಾಲೀಕರಿಗೆ ಅನುಮಾನ ಬಂದಿದೆ. ಕೊನೆಗೆ ಮಾಲೀಕರು ಮನೆಯ ಬಾಗಿಲು ಮುರಿದು ಒಳಗೆ ನುಗ್ಗಿದ್ದಾಗ ಬಾತ್‌ರೂಮಿನಲ್ಲಿ ಇಬ್ಬರು ಮೃತಪಟ್ಟ ವಿಚಾರ ಬೆಳಕಿಗೆ ಬಂದಿದೆ.

ಗ್ಯಾಸ್‌ ಗೀಸರ್‌ನಿಂದ ವಿಷ ಅನಿಲ ಕಾರ್ಬನ್ ಮಾನಾಕ್ಸೈಡ್ ಸೋರಿಕೆಯಾಗಿ ಇಬ್ಬರು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಮೃತದೇಹಗಳನ್ನು ಪೊಲೀಸರು ಆಸ್ಪತ್ರೆಗೆ ಶಿಫ್ಟ್‌ ಮಾಡಿದ್ದಾರೆ.