ಪ್ರೇಮ ವೈಫಲ್ಯ, ಯುವಕ ಸಾವು- ಆತ್ಮಹತ್ಯೆಯೋ, ಕೊಲೆಯೋ?

ಚಿಕ್ಕಬಳ್ಳಾಪುರ: ಕಾಣೆಯಾಗಿ 5 ದಿನಗಳ ಬಳಿಕ ಯುವಕನೊರ್ವ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ರೀತಿಯಲ್ಲಿ ಪತ್ತೆಯಾಗಿದ್ದು, ಸಾವಿನ ಸುತ್ತ ಅನುಮಾನಗಳು ಕೇಳಿಬರುತ್ತಿವೆ.

ಜಿಲ್ಲೆಯ ಚಿಂತಾಮಣಿ ತಾಲೂಕಿನ ಜಂಗಾಲಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಬಿಕಾಂ ವಿದ್ಯಾರ್ಥಿ 22 ವರ್ಷದ ಚಂದನ್ ಮೃತ ಯುವಕ. ಚಂದನ್ ಇದೇ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದ್ದು, ಯುವತಿ ಸಹ ಚಂದನ್ ಮನೆಗೆ ಬಂದು, ಹೋಗುವುದು ಮಾಡುತ್ತಿದ್ದಳು ಎನ್ನಲಾಗಿದೆ. ಈ ವಿಚಾರವಾಗಿ ಯುವತಿಯ ತಂದೆ ಯುವಕ ಚಂದನ್ ಗೆ ವಾರ್ನಿಂಗ್ ನೀಡಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಕೋರಮಂಗಲ ಅಪಘಾತ – 7 ಮಂದಿಯ ಸಾವಿಗೆ ಮದ್ಯ ಪಾರ್ಟಿಯೇ ಕಾರಣ

ಈ ಮಧ್ಯೆ ಸೆಪ್ಟೆಂಬರ್ 25ರಂದು ಚಂದನ್ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದು, ಮೃತ ಚಂದನ್ ತಂದೆ ರಮೇಶ್ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದೀಗ ಜಂಗಾಲಹಳ್ಳಿ ಗ್ರಾಮ ಹೊರವಲಯದ ಪಾಫಾಘ್ನಿ ನದಿ ಕಾಲುವೆ ಬಳಿಯ ಮರದಲ್ಲಿ ಮೃತದೇಹ ಕೊಳೆತು ದುರ್ನಾತದ ವಾಸನೆ ಕುರಿಗಾಹಿಗಳ ಮೂಗಿಗೆ ಬಡಿದಿತ್ತು. ವಿಷಯ ತಿಳಿದ ಕೆಂಚಾರ್ಲಹಳ್ಳಿ ಪೊಲೀಸರು, ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಇದು ಚಂದನ್ ಮೃತದೇಹ ಎಂಬುದು ಗೊತ್ತಾಗಿದೆ.

ಮೃತನ ಪೋಷಕರು ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಕೊಲೆ ಮಾಡಿರುವ ಶಂಕೆ ಇದೆ ಎಂದು ದೂರು ನೀಡಿದ್ದಾರೆ. ಈ ಸಂಬಂಧ ಕೆಂಚಾರ್ಲಹಳ್ಳಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Comments

Leave a Reply

Your email address will not be published. Required fields are marked *