ಪ್ರೀತಿ ನಿರಾಕರಿಸಿದ್ದಕ್ಕೆ 18ರ ಯುವತಿ ಕೊಲೆ

ಹೈದರಾಬಾದ್: ಪ್ರೀತಿ ನಿರಾಕರಿಸಿದ್ದಕ್ಕೆ ಯುವಕನೊಬ್ಬ ಯುವತಿಯನ್ನು ಕೊಲೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ಅನಂತಪುರಂನಲ್ಲಿ ನಡೆದಿದೆ.

ಅರುಣ ಕುಮಾರಿ (18) ಕೊಲೆಯಾದ ಯುವತಿ. ಈಕೆ ತುರ್ಕಪಲ್ಲಿ ರಸ್ತೆ ಕಾಲೋನಿಯಲ್ಲಿ ವಾಸುತ್ತಿದ್ದಳು. ಆದರೆ ಶನಿವಾರ ರಾತ್ರಿ ತನ್ನ ಪ್ರೀತಿಯನ್ನು ಒಪ್ಪಿಕೊಳ್ಳದ ಕಾರಣ ಆರೋಪಿ ರಂಗಸ್ವಾಮಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ಮೃತ ಅರುಣಕುಮಾರಿ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಳು. ಶನಿವಾರ ಸಂಜೆಯಿಂದ ಆಕೆ ಕಾಣೆಯಾಗಿದ್ದಾಳೆ. ಮನೆಯವರು, ನೆರೆಮನೆಯವರು ಆಕೆಗಾಗಿ ಹುಡುಕಾಟ ನಡೆಸಿದ್ದಾರೆ. ಕೊನೆಗೆ ಮನೆಯ ಸಮೀಪವಿದ್ದ ಒಳಚರಂಡಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕುಮಾರಿ ಪತ್ತೆಯಾಗಿದ್ದಾಳೆ.

ಸ್ಥಳೀಯರು ನೋಡಿ ಆಕೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿಯೇ ಯುವತಿ ಮೃತಪಟ್ಟಿದ್ದಳು ಎಂದು ವೈದ್ಯರು ತಿಳಿಸಿದ್ದಾರೆ. ಕುಮಾರಿ ಕುತ್ತಿಗೆಯಲ್ಲಿ ಯಾರೋ ಕಚ್ಚಿದ ಗುರುತು ಮತ್ತು ತಲೆ ಹಿಂಭಾಗದಲ್ಲಿ ಗಾಯಗಳು ಕಂಡು ಬಂದಿದೆ. ಇದರಿಂದ ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಯಾರಾದರೂ ಉದ್ದೇಶಪೂರ್ವಕವಾಗಿ ಕೊಲೆ ಮಾಡಿದ್ದಾರೋ ಅಥವಾ ಕಾಲು ಜಾರಿ ಚರಂಡಿಗೆ ಬಿದ್ದಳೋ ಎಂದು ಪರಿಶೀಲನೆ ನಡೆಸಿದ್ದಾರೆ.

ತನಿಖೆ ವೇಳೆ ಕೊಲೆ ಮಾಡಿರುವುದಾಗಿ ಬೆಳಕಿಗೆ ಬಂದಿದೆ. ಸದ್ಯಕ್ಕೆ ಆರೋಪಿ ರಂಗಸ್ವಾಮಿಯನ್ನು ಬಂಧಿಸಲಾಗಿದೆ. ಯುವತಿಯನ್ನು ಆರೋಪಿ ಪ್ರೀತಿಸುತ್ತಿದ್ದನು. ಆದರೆ ಕುಮಾರಿ ಈತನ ಪ್ರೀತಿಯನ್ನು ನಿರಾಕರಿಸಿದ್ದಾಳೆ. ಇದರಿಂದ ಕೋಪಕೊಂಡ ಆರೋಪಿ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ರಾಜಶೇಖರ್ ರೆಡ್ಡಿ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *