ತುಮಕೂರು: ಮೊಬೈಲ್ ಸಂಪರ್ಕ ಇಲ್ಲದೆ ಪರಸ್ಪರ ದೂರ ಇದ್ದ ಪ್ರೇಮಿಗಳಿಗೆ ಮಾತನಾಡಲು ಮೊಬೈಲ್ ಕೊಟ್ಟಿದಕ್ಕೆ ಆಕ್ರೋಶಗೊಂಡ ಯುವತಿಯ ಪೋಷಕರು ಮಹಿಳೆಯೊಬ್ಬಳನ್ನು ಕೊಲೆ ಮಾಡಿದ್ದಾರೆ.
ಜಿಲ್ಲೆಯ ಕೊರಟಗೆರೆ ತಾಲೂಕಿನ ಅವಲಯ್ಯನ ಪಾಳ್ಯದಲ್ಲಿ ಈ ಘಟನೆ ನಡೆದಿದೆ. ಭಾಗ್ಯಮ್ಮ ಮೃತ ದುರ್ದೈವಿ. ಹೊಳವನಳ್ಳಿಯ ಕೃಷ್ಣಪ್ಪ ಮತ್ತು ಅವಲಯ್ಯ ಪಾಳ್ಯದ ಕುಸುಮ (ಹೆಸರು ಬದಲಾಯಿಸಲಾಗಿದೆ) ಎಂಬ ಯುವ ಜೋಡಿ ಪ್ರೀತಿಸುತ್ತಿದ್ದರು.
ಇವರ ಪ್ರೇಮ ವಿವಾಹಕ್ಕೆ ಯುವತಿ ಕುಸುಮ ಮನೆಯವರ ವಿರೋಧ ಇತ್ತು. ಹಾಗಾಗಿ ಆಕೆಗೆ ಪೋಷಕರು ಮೊಬೈಲ್ ನೀಡಿರಲಿಲ್ಲ. ಹಾಗಾಗಿ ಗ್ರಾಮದ ತೋಟವೊಂದರಲ್ಲಿ ಕೆಲಸಕ್ಕಿದ್ದ ಭಾಗ್ಯಮ್ಮ ಎಂಬವರ ಮೊಬೈಲ್ ನಿಂದ ಕುಸುಮ ಪ್ರಿಯತಮ ಕೃಷ್ಣಪ್ಪಗೆ ಫೋನ್ ಮಾಡಿ ಮನೆ ಬಿಟ್ಟು ಹೋಗಿದ್ದಾರೆ.

ಇದರಿಂದ ಆಕ್ರೋಶಗೊಂಡ ಯುವತಿ ಪೋಷಕರು ಮೊಬೈಲ್ ಕೊಟ್ಟ ಭಾಗ್ಯಮ್ಮಳ ಮೇಲೆ ಹಿಗ್ಗಾಮುಗ್ಗಾ ಥಳಿಸಿದ್ದು, ದೊಣ್ಣೆ, ರಾಡ್ ನಿಂದ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಘಟನೆ ಕಳೆದ ಮಂಗಳವಾರ ನಡೆದಿದ್ದು, ಗಾಯಗೊಂಡ ಭಾಗ್ಯಮ್ಮಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಭಾಗ್ಯಮ್ಮ ಭಾನುವಾರ ಮೃತಪಟ್ಟಿದ್ದಾರೆ.
ಈ ಸಂಬಂಧ ಯುವತಿ ತಂದೆ ಮಲ್ಲೇಶಪ್ಪ, ಸಂಬಂಧಿಗಳಾದ ಗುಂಡಪ್ಪ, ಶ್ರೀಧರ್ ಸೇರಿದಂತೆ ಹಲವರ ವಿರುದ್ಧ ಕೊರಟಗೆರೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv

Leave a Reply