ಕೈ ಸಂಸದ ಅಧೀರ್ ರಂಜನ್ ವಿರುದ್ಧ ಸೋನಿಯಾ ಅಸಮಾಧಾನ

ನವದೆಹಲಿ: ಕಾಶ್ಮೀರ ಆಂತರಿಕ ವಿಚಾರ ಹೇಗಾಗುತ್ತೆ ಎಂದು ಪ್ರಶ್ನಿಸಿದ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ವಿರುದ್ಧ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು.

ಲೋಕಸಭೆಯಲ್ಲಿ ಮಂಗಳವಾರ ಜಮ್ಮು ಮತ್ತು ಕಾಶ್ಮೀರ ವಿಶೇಷ ಸ್ಥಾನಮಾನ ನೀಡುವ ರದ್ದು ವಿಚಾರಕ್ಕೆ ಸಂಬಂಧಿಸಿದ ಚರ್ಚೆಯಲ್ಲಿ ಅಧೀರ್ ರಂಜನ್ ಚೌಧರಿ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕಾಶ್ಮೀರ ಸಮಸ್ಯೆಯು ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ವಿಚಾರ ಅಂತ ಕೇಂದ್ರ ಸರ್ಕಾರವೇ ಸಾಕಷ್ಟು ಬಾರಿ ಹೇಳಿದೆ. ಪಾಕ್ ಹಾಗೂ ಭಾರತ ಮಧ್ಯೆ ಉಂಟಾಗಿರುವ ಭೂ ವಿವಾದವನ್ನು 1948ರಿಂದಲೂ ವಿಶ್ವಸಂಸ್ಥೆ ಮೇಲ್ವಿಚಾರಣೆ ಮಾಡುತ್ತಲೇ ಬಂದಿದೆ. ನಾವು ಶಿಮ್ಲಾ ಒಪ್ಪಂದ ಮತ್ತು ಲಾಹೋರ್ ಘೋಷಣೆಗೆ ಸಹಿ ಹಾಕಿದ್ದೇವೆ. ಹಾಗಿದ್ದ ಮೇಲೆ ಇದು ಆಂತರಿಕ ವಿಚಾರವೋ ದ್ವಿಪಕ್ಷೀಯ ವಿಚಾರವೋ ನೀವೇ ಹೇಳಿ. ಕಾಂಗ್ರೆಸ್ ಪಕ್ಷಕ್ಕೆ ನೀವು ಜ್ಞಾನೋದಯ ಮಾಡಿಸಿ ಎಂದು ವ್ಯಂಗ್ಯವಾಡಿದರು.

ಅಧೀರ್ ರಂಜನ್ ಚೌಧರಿ ಅವರ ಮಾತು ಕೇಳುತ್ತಿದ್ದಂತೆ ಪಕ್ಕದಲ್ಲಿಯೇ ಕುಳಿತಿದ್ದ ಸೋನಿಯಾ ಗಾಂಧಿ ಅವರು ಅಸಮಾಧಾನ ಹೊರ ಹಾಕಿದರು. ಅಷ್ಟೇ ಅಲ್ಲೇ ಉಳಿದ ಕೈ ನಾಯಕರ ಮುಖ ನೋಡಿದರು. ಅಧೀರ್ ರಂಜನ್ ಅವರ ಹೇಳಿಕೆಗೆ ಉಳಿದ ಕಾಂಗ್ರೆಸ್ ಸಂಸದರು ಕೂಡ ಆಕ್ಷೇಪ ವ್ಯಕ್ತಪಡಿಸಿದರು. ತಕ್ಷಣವೇ ಎಚ್ಚೆತ್ತುಕೊಂಡ ಅಧೀರ್ ರಂಜನ್ ಅವರು ನನ್ನ ಮಾತನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಿರುವಿರಿ ಎಂದು ಸದನಕ್ಕೆ ಹೇಳುವ ಮೂಲಕ ಸರಿ ಪಡಿಸಲು ಮುಂದಾದರು.

ಅಧೀರ್ ರಂಜನ್ ಅವರ ಹೇಳಿಕೆಯಿಂದ ಕೋಪಗೊಂಡ ಗೃಹ ಸಚಿವ ಅಮಿತ್ ಶಾ ಅವರು, ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದ ಯಾವುದೇ ಕಾನೂನನ್ನು ರೂಪಿಸಲು ಈ ದೇಶದ ಸಂಸತ್ತು ಯಾವತ್ತೂ ತಡೆಯೊಡ್ಡುವುದಿಲ್ಲ. ಕಾಂಗ್ರೆಸ್ ಹೇಳುವಂತೆ ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆ ಬಗೆಹರಿಸುತ್ತದೇಯಾ ಎಂದು ಪ್ರಶ್ನಿಸಿದರು.

ಜಮ್ಮು ಕಾಶ್ಮೀರವನ್ನು ರಾತ್ರಿ ಬೆಳಗಾಗುವುದರ ಒಳಗಡೆ ಎರಡು ಕೇಂದ್ರಾಡಳಿತ ರಾಜ್ಯವನ್ನಾಗಿ ಮಾಡಿದ್ದೀರಿ. ಇದರಿಂದ ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಹೇಗಾಗುತ್ತದೆ. ನೀವು ಪಾಕ್ ಆಕ್ರಮಿತ ಕಾಶ್ಮೀರ ಬಗ್ಗೆ ಯಾವುದೇ ಆಲೋಚನೆ ಮಾಡಿಲ್ಲ. ನಿಯಮಗಳನ್ನು ಉಲ್ಲಂಘಿಸಿ ರಾಜ್ಯವನ್ನು ವಿಭಜನೆ ಮಾಡುತ್ತಿದ್ದೀರಿ ಎಂದು ಅಧೀರ್ ರಂಜನ್ ಚೌಧರಿ ಆರೋಪಿಸಿದರು.

ಇದಕ್ಕೆ ಕೂಡಲೇ ಉತ್ತರ ನೀಡಿದ ಶಾ, ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಭಾರತ ಮತ್ತು ಜಮ್ಮು ಕಾಶ್ಮೀರ ಸಂವಿಧಾನದಲ್ಲಿ ಇದರ ಬಗ್ಗೆ ಆಧಾರವಿದೆ. ಪಿಓಕೆಯನ್ನು ನಾವು ಪರಿಗಣಿಸಿಲ್ಲ ಎಂದು ನೀವು ಹೇಳುತ್ತಿದ್ದೀರಿ. ಆದರೆ ನಾನು ಹೇಳುತ್ತೇನೆ. ಪಾಕ್ ಆಕ್ರಮಿತ ಕಾಶ್ಮೀರ ಸೇರಿದಾಗ ಮಾತ್ರ ಅದು ಜಮ್ಮು ಕಾಶ್ಮೀರ ಆಗುತ್ತದೆ. ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಅಕ್ಷಯ್ ಚಿನ್ ಸೇರಿಸಿ ಜಮ್ಮು ಕಾಶ್ಮೀರದ ಗಡಿಯನ್ನು ಸಂವಿಧಾನದಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಪಿಓಕೆ ಮತ್ತು ಅಕ್ಷಯ್ ಚಿನ್ ಎರಡೂ ಭಾರತದ ಅವಿಭಾಜ್ಯ ಅಂಗಗಳು. ಜಮ್ಮು ಮತ್ತು ಕಾಶ್ಮೀರಕ್ಕಾಗಿ ನಾನು ಪ್ರಾಣತ್ಯಾಗಕ್ಕೂ ಸಿದ್ಧ ಎಂದು ಗುಡುಗಿದರು.

Comments

Leave a Reply

Your email address will not be published. Required fields are marked *