ಗುರುವಾರ ಬಾಗಲಕೋಟೆ, ಚಿಕ್ಕೋಡಿಯಲ್ಲಿ ಪ್ರಧಾನಿ ಮೋದಿ ರಣ ಕಹಳೆ

ಬೆಳಗಾವಿ/ಬಾಗಲಕೋಟೆ: ದಕ್ಷಿಣ ಕರ್ನಾಟಕದ ಮೊದಲ ಹಂತದ ಚುನಾವಣೆ ಸಿದ್ಧತೆ ನಡೆದಿದ್ದರೆ, ಇತ್ತ ಉತ್ತರ ಕರ್ನಾಟಕದ ಎರಡನೇ ಹಂತದ ಚುನಾವಣಾ ಕಣಕ್ಕೆ ಪ್ರಧಾನಿ ಮೋದಿ ಆಗಮಿಸಿ ರಣ ಕಹಳೆ ಮೊಳಗಿಸಲಿದ್ದಾರೆ.

ವಿಜಯ ಸಂಕಲ್ಪ ಯಾತ್ರೆ ಮೂಲಕ ರಣಕಹಳೆ ಮೊಳಗಿಸುತ್ತಿರುವ ಮೋದಿ, ಗುರುವಾರ ಮಧ್ಯಾಹ್ನ ಸುಮಾರು 2:35 ಕ್ಕೆ ಆಗಮಿಸಿ ಬೃಹತ್ ಸಮಾವೇಶದಲ್ಲಿ ಕಾರ್ಯಕರ್ತರನ್ನ ಉದ್ದೇಶಿಸಿ ಮತ ಯಾಚನೆ ಮಾಡಲಿದ್ದಾರೆ. ಮೋದಿ ಆಗಮನಕ್ಕಾಗಿ ಸಕಲ ಸಿದ್ದತೆ ನಡೆಸಲಾಗಿದೆ. ಬಳಿಕ ಪ್ರಧಾನಿ ಮೋದಿ ಚಿಕ್ಕೋಡಿಗೆ ತೆರಳಲಿದ್ದು, ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಹಾಗೂ ಬೆಳಗಾವಿ ಅಭ್ಯರ್ಥಿ ಸುರೇಶ್ ಅಂಗಡಿ ಪರ ಮತಯಾಚನೆ ಮಾಡಲಿದ್ದಾರೆ. ಮೋದಿ ಆಗಮನಕ್ಕೆ ಚಿಕ್ಕೋಡಿ ಪಟ್ಟಣ ಸಕಲ ಸಿದ್ಧಗೊಂಡಿದೆ. ಸಂಜೆ 4:45 ರ ವೇಳೆಗೆ ಪ್ರಧಾನಿ ಮೋದಿ ಬಾಗಲಕೋಟೆ ಕಾರ್ಯಕ್ರಮ ಮುಗಿಸಿ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಬಳಿಕ ಹೆಲಿಕಾಪ್ಟರ್ ಮೂಲಕ ಚಿಕ್ಕೋಡಿಗೆ ಪ್ರಯಾಣ ಬೆಳಸಲಿದ್ದಾರೆ.

ಚಿಕ್ಕೋಡಿಯ ಬಿ ಕೆ ಕಾಲೇಜು ಎದುರಿನ ಖಾಲಿ ಮೈದಾನದಲ್ಲಿ ಸಿದ್ಧಪಡಿಸಿರುವ ವೇದಿಕೆಯ ಮೂಲಕ ಪ್ರಧಾನಿ ಮೋದಿ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮೋದಿ ಸಮಾವೇಶಕ್ಕೆ ಬೆಳಗಾವಿ, ಚಿಕ್ಕೋಡಿ ಸೇರಿದಂತೆ ಪಕ್ಕದ ಮಹಾರಾಷ್ಟ್ರ ಭಾಗದಿಂದ 2 ಲಕ್ಷಕ್ಕೂ ಹೆಚ್ಚಿನ ಜನ ಆಗಮಿಸುವ ನೀರಿಕ್ಷೆ ಇದೆ. ಈಗಾಗಲೇ ಮೋದಿ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಪ್ರಧಾನಿ ಕಾರ್ಯಕ್ರಮದ ಭದ್ರತೆಗೆ 1,500 ಪೊಲೀಸರು ಹಾಗೂ ಎಸ್ ಪಿ ಜಿ ಸಿಬ್ಬಂದಿಯನ್ನ ನಿಯೋಜಿಸಲಾಗಿದೆ. ಚಿಕ್ಕೋಡಿ ಪಟ್ಟಣದ ವಿವಿಧೆಡೆ 13 ಕ್ಕೂ ಹೆಚ್ಚು ಸ್ಥಳಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.

ಕಾರ್ಯಕ್ರಮಕ್ಕೆ ಎರಡು ಗಂಟೆ ಮೊದಲು ಬಿಜೆಪಿ ಕಾರ್ಯಕತರು ಆಗಮಿಸುವಂತೆ ಬಿಜೆಪಿ ಮುಖಂಡರು ವಿನಂತಿಸಿಕೊಂಡಿದ್ದಾರೆ. ಬಿಜೆಪಿ ಮುಖಂಡರಾದ ಜಗದೀಶ್ ಶೆಟ್ಟರ, ನಟಿ ತಾರಾ, ಸಿಎಂ ಉದಾಸಿ ಸೇರಿದಂತೆ ಅನೇಕ ಮುಖಂಡರು ಭಾಗಿಯಾಗಲಿದ್ದಾರೆ.

Comments

Leave a Reply

Your email address will not be published. Required fields are marked *