ಸಿದ್ದರಾಮಯ್ಯಗೆ ಕುರಿ ಮರಿ ಗಿಫ್ಟ್

– ವೇದಿಕೆ ಮೇಲೆ ಗದ್ದಲ ಮಾಜಿ ಸಿಎಂ ಗರಂ

ಕಲಬುರಗಿ: ಜಿಲ್ಲೆಯ ಜೇವರ್ಗಿಯಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಮಾಜಿ ಸಿಎಂ ಸಿದ್ದಾರಮಯ್ಯ ಅವರಿಗೆ ಪಕ್ಷದ ಕಾರ್ಯಕರ್ತರು ಕುರಿ ಗಿಫ್ಟ್ ನೀಡಿದ್ದಾರೆ.

ಕಲಬುರಗಿ ಲೋಕಸಭಾ ಕಾಂಗ್ರೆಸ್-ಮೈತ್ರಿ ಅಭ್ಯರ್ಥಿ, ಕಾಂಗ್ರೆಸ್ ಸಂಸದಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರ ಪರವಾಗಿ ಸಿದ್ದರಾಮಯ್ಯ ಅವರು ಜೇವರ್ಗಿಯಲ್ಲಿ ಪ್ರಚಾರ ನಡೆಸಿದ್ದರು. ವೇದಿಕೆ ಮೇಲೆ ಬಂದ ಕಾಂಗ್ರೆಸ್ ಪಕ್ಷದ ಸ್ಥಳೀಯ ಕಾರ್ಯಕರ್ತರು ಸಿದ್ದರಾಮಯ್ಯ ಅವರಿಗೆ ಕಂಬಳಿ ನೀಡಿ ಕುರಿ ಮರಿಯನ್ನು ನೀಡಿದರು. ಈ ವೇಳೆ ಗಾಬರಿಗೊಂಡಿದ್ದ ಕುರಿ ಮರಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿತ್ತು. ಇತ್ತ ಕುರಿ ಗಿಫ್ಟ್ ಕೊಟ್ಟ ಕಾರ್ಯಕರ್ತರು ಪರಸ್ಪರ ತಳ್ಳಾಡುತ್ತಿದ್ದರು. ಇದರಿಂದಾಗಿ ಮಾಜಿ ಸಿಎಂ ಸಿಡಿಮಿಡಿಗೊಂಡರು.

ಕುಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಪರ ಇಂದು ಭರ್ಜರಿ ಮತ ಬೇಟೆ ನಡೆಸಿದರು. ಯಾದಗಿರಿ ಜಿಲ್ಲೆ ಸೈದಾಪುರದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ್ದ ಮಾಜಿ ಸಿಎಂ, ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಯಾವತ್ತೂ ಅಧಿಕಾರದ ಹಿಂದೆ ಹೋಗಲಿಲ್ಲ. ಅಧಿಕಾರವೇ ಅವರ ಹಿಂದೆ ಬಂದಿದೆ. ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಕಾಂಗ್ರೆಸ್‍ನಲ್ಲಿದ್ದಾಗ ಅವರು ಹೇಳಿದ ಎಲ್ಲ ಕೆಲಸವನ್ನು ಮಾಡಿಕೊಟ್ಟೆ. ಆದರೆ ಪಕ್ಷ ಬಿಟ್ಟು ಹೋದರು. ಮುಂಬೈಗೆ ಹೋಗಿ ಬಿಜೆಪಿ ಹತ್ತಿರ ದುಡ್ಡು ತೆಗೆದುಕೊಂಡು ಅವರ ಪಕ್ಷ ಸೇರಿಕೊಂಡರು. ಉಮೇಶ್ ಜಾಧವ್ ಅವರಿಗೆ ನಾಚಿಕೆ ಆಗಬೇಕು. ಮಲ್ಲಿಕಾರ್ಜುನ ಖರ್ಗೆ ಅವರ ಬೆನ್ನಿಗೆ ಚೂರಿ ಹಾಕಿದ ಅವರನ್ನು ಹೀನಾಯವಾಗಿ ಸೋಲಿಸಬೇಕು. ಆಗ ಅವರಿಗೆ ಬುದ್ಧಿ ಬರುತ್ತದೆ ಎಂದು ಗುಡುಗಿದ್ದರು.

Comments

Leave a Reply

Your email address will not be published. Required fields are marked *