ಹಾಸನ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಕಣಕ್ಕೆ- ಎಚ್‍ಡಿಡಿ ಸುಳಿವು

– ಪ್ರಧಾನಿ ಮೋದಿ ಬಗ್ಗೆ ತಮಾಷೆ ಮಾಡಬೇಡಿ

ಹಾಸನ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರ ಪುತ್ರ ಪ್ರಜ್ವಲ್ ಸ್ಪರ್ಧಿಸಲಿರುವ ವಿಚಾರದ ಬಗ್ಗೆ ವರಿಷ್ಠ ಎಚ್.ಡಿ.ದೇವೇಗೌಡ ಅವರು ಸುಳಿವು ಬಿಟ್ಟುಕೊಟ್ಟಿದ್ದಾರೆ.

ಜಿಲ್ಲಾ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಜ್ವಲ್ ಲೋಕಸಭಾ ಅಭ್ಯರ್ಥಿ ಅಂತ ಮುಂದಿನ ಕಾರ್ಯಕರ್ತರ ಸಭೆಯಲ್ಲಿ ತಿಳಿಸುತ್ತೇನೆ ಎಂದು ಪರೋಕ್ಷವಾಗಿ ಸುಳಿವು ಬಿಟ್ಟು ಕೊಟ್ಟಿದ್ದಾರೆ. ಇದೇ ವೇಳೆ ಪಕ್ಷದ ಕಾರ್ಯಕರ್ತರಿಗೆ ಸಲಹೆ ನೀಡಿದ ದೇವೇಗೌಡ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ತಮಾಷೆ ಮಾಡಬೇಡಿ ಎಂದು ಸಿಎಂ ಕುಮಾರಸ್ವಾಮಿ ಅವರನ್ನು ಟೀಕಿಸಿದ್ದಕ್ಕೆ ತಿರುಗೇಟು ನೀಡಿದರು.

ಹಾಸನದಲ್ಲಿ ಕಳೆದ 56 ವರ್ಷಗಳಿಂದ ನನ್ನನ್ನು ರಾಜಕೀಯವಾಗಿ ಬೆಳೆಸಿರುವಿರಿ. ನನಗೆ ಯಾರೂ ಶತ್ರುಗಳಿಲ್ಲ. ನಾನು ಯಾವುದೇ ಸಮುದಾಯಕ್ಕೆ ಅನ್ಯಾಯ ಮಾಡಿಲ್ಲ. ಯಾರ ಮನಸ್ಸನ್ನೂ ನೋಯಿಸಲ್ಲ. ಪಕ್ಷ ನನ್ನ ಮನೆಯ ಆಸ್ತಿಯಲ್ಲ, ಇದು ಎಲ್ಲರಿಗೂ ಸೇರಿದ ಪಕ್ಷ ಎಂದ ಅವರು, ಕುಮಾರಸ್ವಾಮಿ 38 ಜನರನ್ನು ಕಟ್ಟಿಕೊಂಡು ಸಿಎಂ ಆಗಿ ಅವರ ನೋವೇನು ಎಂದು ನನಗೆ ಗೊತ್ತಿದೆ. ಕಾಂಗ್ರೆಸ್‍ನ 78 ಜನ ಶಾಸಕರನ್ನು ಕಟ್ಟಿಕೊಂಡು ಸರ್ಕಾರ ನಡೆಸಬೇಕು ಎಂದರು.

ದೇವೇಗೌಡರದ್ದು ಅಪ್ಪ ಮಕ್ಕಳ ಪಕ್ಷ ಅಂತ ಕೆಲವು ಟೀಕೆ ಮಾಡುತ್ತಾರೆ. ಮಾಜಿ ಸಿಎಂ ಸಿದ್ದರಾಮಯ್ಯ ನಮ್ಮ ಪಕ್ಷದಲ್ಲಿದ್ದಾಗ ಅವರಿಗೆ ಸ್ಥಾನ ಮಾನಕೊಡಲಿಲ್ಲವೇ ಎಂದ ಅವರು, ಬೆಂಗಳೂರಿನಲ್ಲಿ ಜನವರಿ 17 ಜೆಡಿಎಸ್ ಅಲ್ಪ ಸಂಖ್ಯಾತರ ಬೃಹತ್ ಸಮಾವೇಶ ನಡೆಯಲಿದೆ. ಕುಮಾರಸ್ವಾಮಿ ಸಿಎಂ ಆದ ಬಳಿಕ ಏನು ಮಾಡಿದ್ದಾರೆ ಅಂತ ತಿಳಿಸುವ ಜವಾಬ್ದಾರಿ ನನ್ನ ಮೇಲಿದೆ. ಇದೇ ತಿಂಗಳ 29-30 ರಂದು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ಜನವರಿ 30 ರಂದು ಪಕ್ಷದ ಕಾರ್ಯಕರ್ತರ ಸಮಾವೇಶದ ಬಗ್ಗೆ ಚಿಂತನೆ ಮಾಡಿದ್ದೇನೆ. ಪಕ್ಷ ಉಳಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ನಮ್ಮಲ್ಲಿ ಹೊಂದಾಣಿಕೆಗೆ ಹಲವಾರು ಸಮಸ್ಯೆಗಳಿವೆ. ಮೈತ್ರಿಯಲ್ಲಿ ಭಿನ್ನಾಭಿಪ್ರಾಯ ಇದೆ ಎನ್ನುವುದು ಪರೋಕ್ಷವಾಗಿ ಉಲ್ಲೇಖಿಸಿದರು.

ಮಹಿಳಾ ಅಭಿವೃದ್ಧಿ ನಮ್ಮ ಪ್ರಮುಖ ಆಧ್ಯತೆ ಅಂತ ಪ್ರಧಾನಿ ಮೋದಿ ಭಾಷಣ ಮಾಡುತ್ತಾರೆ. ಆದರೆ ಮಹಿಳೆಯರ ಅಭಿವೃದ್ಧಿ ಎಲ್ಲಿಯಾಗಿದೆ. ಭಾಷಣ ಮಾಡಲು ನಮಗೂ ಬರುತ್ತದೆ ಎಂದು ಕುಟುಕಿದರು.

ಸಿದ್ದರಾಮಯ್ಯ ಅವರು ನಾನು ಮಾಡಿದ ಯಾವುದೇ ಕಾರ್ಯಕ್ರಮಕ್ಕೆ ಅಡ್ಡಿಮಾಡಬಾರದು ಅಂತ ಹೇಳಿದ್ದಾರೆ. ಅದನ್ನು ಮುಂದುವರಿಸಿ ಸಾಲ ಮನ್ನಾ ಮಾಡುವುದು ಸುಲಭದ ಮಾತಲ್ಲ. ಕುಮಾರಸ್ವಾಮಿ ಅವರನ್ನು ಸಿದ್ದರಾಮಯ್ಯ ಅವರೇ ಮೇಲೆ ಬಿದ್ದು ಸಿಎಂ ಮಾಡಿದರು ಎಂದ ಅವರು, ಈ ಹಿಂದೆ ಬಿಜೆಪಿಯವರ ಜೊತೆ ಕುಮಾರಸ್ವಾಮಿ ಹೋಗುವ ಸಂದರ್ಭ ಸೃಷ್ಟಿಸಿದ್ದು ಯಾರು? ಕಾಂಗ್ರೆಸ್‍ನವರು ಮಾಡಿದರಾ? ಅಥವಾ ಬೇರೇ ಯಾರೋ ಮಾಡಿದರಾ ಎನ್ನುವ ಪ್ರಶ್ನೆಗೆ ಸಮಯ ಬಂದಾಗ ಉತ್ತರ ಕೊಡುತ್ತೇನೆ ಎಂದು ಹೇಳಿದರು.

ನನಗೆ ಯಾರ ಬಗ್ಗೆಯೂ ಭಯವಿಲ್ಲ. ಸಮ್ಮಿಶ್ರ ಸರ್ಕಾರಕ್ಕೆ ತೊಂದರೆಯಾಗಲು ನಾನು ಬಿಡುವುದಿಲ್ಲ. ಈ ವಿಚಾರವಾಗಿ ಸಿದ್ದರಾಮಯ್ಯ ಅವರ ಜೊತೆಗೆ ಎರಡು ದಿನ ಚರ್ಚೆ ಮಾಡಿದ್ದೇನೆ ಎಂದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *