ಪ್ರಜ್ವಲ್‍ಗೆ 250 ಕೆಜಿಯ ಬೃಹತ್ ಸೇಬಿನ ಹಾರ – ಶುಭ ಮುಹೂರ್ತದಲ್ಲಿ ನಾಮಪತ್ರ ಸಲ್ಲಿಕೆ

– ಬರೀ ಕಾಲಿನಲ್ಲಿ ಓಡಾಡಿದ ಪ್ರಜ್ವಲ್
– ಸೂಚಕರಾಗಿ ಸಿಎಂ ಎಚ್‍ಡಿಕೆ ಸಹಿ

ಹಾಸನ: ಹಾಸನ ಲೋಕಸಭಾ ಚುನಾವಣೆ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಇಂದು ನಾಮಪತ್ರ ಸಲ್ಲಿದ್ದಾರೆ. ಈ ವೇಳೆ ಸಿಎಂ ಕುಮಾರಸ್ವಾಮಿ, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಪತ್ನಿ ಭವಾನಿ ರೇವಣ್ಣ, ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ ಇದ್ದರು.

ಇಂದು ಬೆಳಗ್ಗೆ 10:59 ರಿಂದ 12:30 ರವರೆಗೆ ರಾಹುಕಾಲವಿತ್ತು. ಹೀಗಾಗಿ ರಾಹುಕಾಲ ಮುಗಿದ ಬಳಿಕ 12:35ಕ್ಕೆ ಪ್ರಜ್ವಲ್ ರೇವಣ್ಣ ಅವರು ಚುನಾವಣಾಧಿಕಾರಿ ಅಕ್ರಂ ಪಾಷ ಅವರಿಗೆ ನಾಮಪತ್ರ ಸಲ್ಲಿಸಿದರು. ನಾಮಪತ್ರಕ್ಕೆ ಸಿಎಂ ಕುಮಾರಸ್ವಾಮಿ ಸೂಚಕರಾಗಿ ಸಹಿ ಮಾಡಿದ್ದಾರೆ.

ನಾಮಪತ್ರ ಸಲ್ಲಿಕೆಗೂ ಮುನ್ನ ಪ್ರಜ್ವಲ್ ರೇವಣ್ಣ ಹಾಸನದ ಎನ್.ಆರ್ ಸರ್ಕಲ್‍ನಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಬೃಹತ್ ರ್ಯಾಲಿ ನಡೆಸಲಾಯಿತು. ಈ ವೇಳೆ ಮೈತ್ರಿ ಪಕ್ಷಗಳ ಕಾರ್ಯಕರ್ತರು ಪ್ರಜ್ವಲ್ ರೇವಣ್ಣ ಅವರಿಗೆ 250 ಕೆಜಿಯ ಬೃಹತ್ ಸೇಬಿನ ಹಾರ ಹಾಕಿದರು. ಬಳಿಕ ಮೆರವಣಿಗೆಯ ಉದ್ದಕ್ಕೂ ಹೂವಿನ ಮಳೆ ಸುರಿಯುತ್ತಿತ್ತು. ಈ ಬೃಹತ್ ಮೆರವಣಿಗೆಯಲ್ಲಿ 10 ಸಾವಿರಕ್ಕೂ ಹೆಚ್ಚು ಜನ ಸೇರಿ ಪ್ರಜ್ವಲ್ ರೇವಣ್ಣ ಪರ ಘೋಷಣೆ ಕೂಗಿದರು.

ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ ಅವರ ನೇತೃತ್ವದಲ್ಲಿ ಬೃಹತ್ ಮೆರವಣಿಗೆ ಮೂಲಕ ಪ್ರಜ್ವಲ್ ರೇವಣ್ಣ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದರು. ಇತ್ತ ಸಿಎಂ ಕುಮಾರಸ್ವಾಮಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಒಂದೇ ಕಾರಿನಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದರು. ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ನಾಮಪತ್ರ ಸಲ್ಲಿಕೆ ಹಿನ್ನಲೆಯಲ್ಲಿ ಚಪ್ಪಲಿ ಹಾಕದೇ ಬರಿಗಾಲಲ್ಲಿ ಓಡಾಡುತ್ತಿದ್ದರು.

ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆ ಬಂದ ನಂತರ ಪ್ರಜ್ವಲ್ ರೇವಣ್ಣ ಅವರು, ಚಿಕ್ಕಪ್ಪ, ಸಿಎಂ ಕುಮಾರಸ್ವಾಮಿ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. 12:30ಕ್ಕೂ ಮೊದಲೇ ಪ್ರಜ್ವಲ್ ರೇವಣ್ಣ ಅವರು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದರು. ರಾಹುಕಾಲ ಮುಗಿದ ಬಳಿಕ ಚುನಾವಣೆ ಅಧಿಕಾರಿಗಳಿಗೆ ವಿವಧ ದಾಖಲೆಗಳನ್ನು ನೀಡಿ, ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಸಿದರು.

ಇವತ್ತಿನ ಪಂಚಾಗ ಹೇಗಿದೆ?
ಶ್ರೀ ವಿಳಂಬಿನಾಮ ಸಂವತ್ಸರ, ಉತ್ತರಾಯಣ ಪುಣ್ಯಕಾಲ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣ ಪಕ್ಷ, ದ್ವಿತೀಯಾ ತಿಥಿ, ಶುಕ್ರವಾರ, ಹಸ್ತ ನಕ್ಷತ್ರ ಇದೆ. ರಾಹುಕಾಲ ಬೆಳಗ್ಗೆ 10:59 ರಿಂದ 12:30 ರವರಗೆ ಇದ್ದರೆ ಗುಳಿಕಕಾಲ ಬೆಳಗ್ಗೆ 7:57 ರಿಂದ 9:28, ಯಮಗಂಡಕಾಲ ಮಧ್ಯಾಹ್ನ 3:32 ರಿಂದ 5:03 ವರೆಗೆ ಇದೆ.

Comments

Leave a Reply

Your email address will not be published. Required fields are marked *