ಕಾಫಿನಾಡಲ್ಲಿ ನಾಳೆಯಿಂದ ರಸ್ತೆಗಿಳಿಯಲಿವೆ KSRTC ಬಸ್

ಚಿಕ್ಕಮಗಳೂರು: ಕಳೆದ 40 ದಿನಗಳಿಂದ ಸಂಪೂರ್ಣ ಬಂದ್ ಆಗಿದ್ದ ಸರ್ಕಾರಿ ಬಸ್ ಗಳು ನಾಳೆಯಿಂದ ರಸ್ತೆಗಿಳಿಯಲಿವೆ.

ಚಿಕ್ಕಮಗಳೂರಿನಲ್ಲಿ ಕೆಲವು ನಿರ್ಬಂಧಗಳನ್ನು ವಿಧಿಸಿ ಬಸ್ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಬಸ್ ಬಂತು ಎಂದು ಪ್ರಯಾಣಿಕರು ದಿಢೀರ್ ಅಂತ ಹತ್ತುವಂತಿಲ್ಲ. ತಮ್ಮ ಸಂಪೂರ್ಣ ವಿವರ ನೀಡಿ ನಂತರ ಪ್ರಯಾಣಿಸುವ ನಿಯಮ ಜಾರಿಗೆ ತರಲಾಗಿದೆ. ಹೀಗಾಗಿ ಬಸ್ ಹೊರಡುವ ಅರ್ಧ ಗಂಟೆ ಮುಂಚೆ ನಿಲ್ದಾಣಕ್ಕೆ ಬರಬೇಕಾಗಿದೆ.

ಮಾಹಿತಿ ನೀಡುವ ವೇಳೆ ಪ್ರಯಾಣಿಕರ ಹೆಸರು, ವಿಳಾಸ, ಮೊಬೈಲ್ ನಂಬರ್ ಎಲ್ಲಿಂದ-ಎಲ್ಲಿಗೆ ಹೋಗಬೇಕು ಎಂಬೆಲ್ಲ ಮಾಹಿತಿ ನೀಡಬೇಕು. ಬರುವಾಗ ಐ.ಡಿ.ಕಾರ್ಡ್ ತರುವುದು ಕಡ್ಡಾಯ. ಅಷ್ಟೇ ಅಲ್ಲದೆ ಒಂದು ಬಸ್ಸಿನಲ್ಲಿ 27 ಜನರಿಗೆ ಮಾತ್ರ ಅವಕಾಶ. ಮೊದಲು ಒಂದು ಬಸ್ ನಲ್ಲಿ 50-60 ಜನ ಪ್ರಯಾಣ ಮಾಡಬಹುದಿತ್ತು. ಆದರೀಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ 27 ಜನರಿಗೆ ಸೀಮಿತಗೊಳಿಸಲಾಗಿದೆ.

ಜಿಲ್ಲಾ ಕೇಂದ್ರದಿಂದ ತಾಲೂಕು ಕೇಂದ್ರಗಳಿಗೆ ಮತ್ತು ಅಲ್ಲಿಂದ ಜಿಲ್ಲಾ ಕೇಂದ್ರಕ್ಕೆ ಬಸ್ ಗಳು ಓಡಾಡಲಿವೆ. ಈಗಾಗಲೇ ಬಸ್ ನಿಲ್ದಾಣದಲ್ಲಿ ಸಾಮಾಜಿಕ ಅಂತ ಕಾಪಾಡುವ ನಿಟ್ಟಿನಲ್ಲಿ ಸಿಬ್ಬಂದಿ ಬಸ್ ನಿಲ್ದಾಣದ ತುಂಬೆಲ್ಲ ಗೆರೆ ಎಳೆದಿದ್ದಾರೆ. ಪ್ರಯಾಣಿಕರು ಆ ಬಾಕ್ಸ್ ಒಳಗೆ ನಿಂತು, ಮಾಹಿತಿ ನೀಡಿ ಬಸ್ ಹತ್ತಬೇಕು.

ಕೆಎಸ್‍ಆರ್ ಟಿಸಿ ವಿಭಾಗಿಯ ನಿಯಂತ್ರಣಾಧಿಕಾರಿ ವಿರೇಶ್ ಎಚ್.ಟಿ. ಬಸ್ ನಿಲ್ದಾಣದಲ್ಲಿ ಸಿಬ್ಬಂದಿ ಯಾವ ರೀತಿ ಬಂದೋಬಸ್ತ್ ಇರಬೇಕು, ಪ್ರಯಾಣಿಕರ ಸಂಚಾರ ಹೇಗಿರಬೇಕೆಂದು ಕೃತಕವಾಗಿ ತರಬೇತಿ ನೀಡಿದ್ದಾರೆ. ನಾಳೆಯಿಂದ ಜಿಲ್ಲಾದ್ಯಂತ ಶೇ.25 ರಷ್ಟು ಅಂದರೆ, 100-125 ಬಸ್ ಗಳು ಸಂಚಾರ ಆರಂಭಿಸಲಿವೆ. ಗ್ರಾಮೀಣ ಭಾಗಕ್ಕೆ ಹೋಗುವ ಪ್ರಯಾಣಿಕರಿಗೂ ಬಸ್ಸಿನ ಸೌಲಭ್ಯವಿದ್ದು, ಬೆಳಗ್ಗೆ 7 ರಿಂದ ಸಂಜೆ 7ರವರೆಗೆ ಬಸ್ ಗಳು ಓಡಾಡಲಿವೆ.

Comments

Leave a Reply

Your email address will not be published. Required fields are marked *