ಕಲ್ಲು ಕ್ವಾರಿ ವಿರೋಧಿಸಿದ್ದಕ್ಕೆ ದಲಿತ ವ್ಯಕ್ತಿಗೆ ಉಡುಪಿಯಲ್ಲಿ ಹಲ್ಲೆ

ಉಡುಪಿ: ಕಲ್ಲುಕ್ವಾರಿ ವಿರೋಧಿಸಿದ್ದಕ್ಕೆ ದಲಿತ ವ್ಯಕ್ತಿಗೆ ಹಲ್ಲೆ ನಡೆಸಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ನಡೆದಿದೆ.

ಸಿದ್ಧಾಪುರದ ಕೆಂಪುಕಲ್ಲು ಕ್ವಾರಿಯಿಂದಾಗಿ ಪರಿಸರದ ನೂರಾರು ಕುಟುಂಬಗಳಿಗೆ ಸಮಸ್ಯೆಯಾಗುತ್ತಿತ್ತು. ಕಲ್ಲುಕ್ವಾರಿ ಸ್ಥಳೀಯರ ನಿದ್ದೆಗೆಡಿಸಿತ್ತು. ಇದರ ವಿರುದ್ಧ ಬಹಳ ಸಮಯದಿಂದ ಹೋರಾಟ ನಡೆಯುತ್ತಿತ್ತು. ಹೋರಾಟದ ಮುಂದಾಳತ್ವ ವಹಿಸಿದ್ದ ಆನಂದ ಕರೋರ್ ಮೇಲೆ, ನಾಲ್ಕೈದು ಮಂದಿ ಕ್ವಾರಿಗೆ ಸಂಬಂಧಿಸಿದ ಪುಂಡರು ಹಲ್ಲೆ ನಡೆಸಿದ್ದಾರೆ.

ದ್ವಿಚಕ್ರ ವಾಹನದಲ್ಲಿ ಆನಂದ್ ಹೋಗುವ ವೇಳೆ ಟೆಂಪೋದಲ್ಲಿ ಡಿಕ್ಕಿ ಹೊಡೆಸಿದ್ದಾರೆ. ನಂತರ ಆರೋಪಿಗಳಾದ ಅಭಿಜಿತ್ ಶೆಟ್ಟಿ, ಅರುಣ ಗೊಲ್ಲ, ರವೀಂದ್ರ ಗಾಣಿಗ, ತಿಮ್ಮಪ್ಪ ಶೆಟ್ಟಿ, ರವಿ ಶೆಟ್ಟಿ ಹಲ್ಲೆ ನಡೆಸಿ ಮತ್ತು ನಿಂದನೆ ಮಾಡಿದರು ಎಂದು ಆನಂದ ಕರೋರ್ ದೂರಿದ್ದಾರೆ.

ಹಲ್ಲೆಗೊಳಗಾದ ಆನಂದ್ ಕರೋರ್ ಮಾತನಾಡಿ, ಹೊಸಂಗಡಿ ಎಡಮೊಗೆ ಗ್ರಾಮದಲ್ಲಿ ಕೆಂಪುಕಲ್ಲು ಕೋರೆ ಅವ್ಯಾಹತವಾಗಿ ನಡೆಯುತ್ತಿದೆ. ಅಧಿಕಾರಿಗಳಿಗೆ ದೂರು ನೀಡಿದ್ರೂ ಅಧಿಕಾರಿಗಳು ದೂರು ದಾಖಲು ಮಾಡಿಕೊಳ್ಳುತ್ತಿಲ್ಲ. ಟೆಂಪೋ- ಲಾರಿಗಳು ಹೋಗಿ ರಸ್ತೆಗಳೆಲ್ಲಾ ಗುಂಡಿ ಬಿದ್ದಿದೆ. ಈ ಬಗ್ಗೆ ಸ್ಥಳೀಯರಿಗೆ ದೂರು ನೀಡಿದ್ದೇನೆ. ರಸ್ತೆ ರಿಪೇರಿ ಮಾಡಿ ಅಂತ ಒಂದು ಸಾರಿ ಲಾರಿ ಅಡ್ಡಗಟ್ಟಿ ಹೇಳಿದ್ದೆ. ಅದಕ್ಕೆ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ್ದಾರೆ. ಹೊಡೆದು- ಚೈನು, ಪರ್ಸು, ಮೊಬೈಲ್ ಕಿತ್ತುಕೊಂಡಿದ್ದಾರೆ ಎಂದು ದೂರಿದರು.

ಈ ಹಿಂದೆ ಸ್ಥಳೀಯ ಗ್ರಾಮ ಪಂಚಾಯತ್‍ಗೆ ಆನಂದ್ ಕಲ್ಲುಕ್ವಾರಿ ಬಗ್ಗೆ ದೂರಿದ್ದರು. ಈ ಎಲ್ಲಾ ಹಿನ್ನೆಲೆಯಲ್ಲಿ ಕ್ವಾರಿಯ ಮಂದಿ ಥಳಿಸಿದ್ದಾರೆ. ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳು ತಲೆ ಮರೆಸಿಕೊಂಡಿದ್ದು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *