ಮದ್ಯ ಪ್ರಿಯರಿಗೆ ಗುಡ್‍ನ್ಯೂಸ್!

ಬೆಂಗಳೂರು: ಕೊರೊನಾ ವೈರಸ್ ಲಾಕ್‍ಡೌನ್‍ನಿಂದಾಗಿ ಕಳೆದ ಒಂದು ತಿಂಗಳಿನಿಂದ ಎಣ್ಣೆ ಸಿಗದೆ ಮದ್ಯ ಪ್ರಿಯರು ಕಂಗಾಲಾಗಿದ್ದಾರೆ. ಅವರಿಗೆ ಈಗ ಸರ್ಕಾರ ಗುಡ್‍ನ್ಯೂಸ್ ಕೊಡಲು ಮುಂದಾಗಿದೆ ಎಂಬ ಮಾಹಿತಿ ಲಭಿಸಿದೆ.

ಒಂದುಕಡೆ ಮದ್ಯ ವ್ಯಾಪಾರಿಗಳು, ಇನ್ನೊಂದುಕಡೆ ಎಣ್ಣೆ ಪ್ರಿಯರ ಒತ್ತಾಯವು ಫಲ ನೀಡುತ್ತಾ? ಮತ್ತೆ ಮದ್ಯ ಮಾರಾಟ ಆರಂಭವಾಗುತ್ತಾ? ಇಷ್ಟು ದಿನ ಲಾಕ್‍ಡೌನ್ ಮುಗಿಯುವವರೆಗೆ ಓಪನ್ ಮಾಡುವ ಪ್ರಶ್ನೆಯೇ ಇಲ್ಲಾ ಎನ್ನುತ್ತಿದ್ದ ಸರ್ಕಾರ ಈಗ ಮದ್ಯದಂಗಡಿ ತೆರೆಯಲು ಮುಂದಾಗುತ್ತಾ ಎನ್ನುವ ಪ್ರಶ್ನೆ ಎದ್ದಿದೆ.

ಸಂಪೂರ್ಣ ಲಾಕ್‍ಡೌನ್ ಸಡಲಿಕೆಗೆ ಮುನ್ನವೇ ಮದ್ಯದ ವ್ಯಾಪಾರ ಶುರು ಮಾಡಬೇಕಾ, ಬೇಡವಾ ಎಂಬ ತೀರ್ಮಾನ ಇಂದಿನ ಸಚಿವ ಸಂಪುಟದಲ್ಲಿ ಆಗಲಿದೆ. ಇಡೀ ರಾಜ್ಯದ ಲಾಕ್‍ಡೌನ್ ಸಡಲಿಕೆ ಆಗದಿದ್ದರೂ ಗ್ರೀನ್ ಹಾಗೂ ಯೆಲ್ಲೋ ಝೋನ್‍ಗಳಲ್ಲಿ ಲಾಕ್‍ಡೌನ್ ಸಡಿಲಿಕೆ ಜೊತೆಗೆ ಮದ್ಯ ಮಾರಾಟ ಆರಂಭಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.

ಪರ-ವಿರೋಧ ವಾದ ಏನೇ ಇದ್ದರೂ ಆರ್ಥಿಕ ಲೆಕ್ಕಾಚಾರದಿಂದ ಮದ್ಯ ವ್ಯಾಪಾರಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ಕೊಡುವ ಸಾಧ್ಯತೆ ಇದೆ. ತಾಲೂಕು ಆಧಾರದ ಮೇಲೆ ಝೋನ್‍ಗಳನ್ನು ವಿಭಾಗಿಸಲು ಮುಂದಾದ ರಾಜ್ಯ ಸರ್ಕಾರ ಗ್ರೀನ್ ಹಾಗೂ ಯೆಲ್ಲೋ ಝೋನ್‍ಗಳಲ್ಲಿ ಮದ್ಯ ವ್ಯಾಪಾರಕ್ಕೆ ಅವಕಾಶ ಕೊಡುವ ಬಗ್ಗೆಯು ಚಿಂತನೆ  ಮಾಡಿದೆ ಎನ್ನಲಾಗುತ್ತದೆ.

ಲಾಕ್‍ಡೌನ್‍ನಿಂದಾಗಿ ಅಬಕಾರಿ ಇಲಾಖೆ ಒಂದರಿಂದಲೇ ಸರ್ಕಾರ 2 ಸಾವಿರ ಕೋಟಿ ರೂ. ನಷ್ಟ ಅನುಭವಿಸಿದೆ. ನಷ್ಟದ ಪ್ರಮಾಣ ತಗ್ಗಿಸಲು ಗ್ರೀನ್ ಹಾಗೂ ಯೆಲ್ಲೋ ಝೋನ್‍ನಲ್ಲಿ ಮದ್ಯ ವ್ಯಾಪಾರ ಆರಂಭಿಸುವ ಚಿಂತನೆಯನ್ನು ಸರ್ಕಾರ ಹೊಂದಿದೆ ಎಂದು ಹೇಳಲಾಗುತ್ತಿದೆ.

ಒಂದು ವೇಳೆ ರೆಡ್ ಝೋನ್‍ನ ಜನರು ಮದ್ಯಕ್ಕಾಗಿ ಗ್ರೀನ್ ಹಾಗೂ ಯೆಲ್ಲೋ ಝೋನ್‍ಗಳಿಗೆ ಬಂದರೆ ಅಪಾಯ ಎಂಬ ಆತಂಕವು ಸರ್ಕಾರಕ್ಕಿದೆ. ಅದರ ಬಗ್ಗೆ ಯೋಚಿಸಿ ಮದ್ಯ ಮಾರಾಟಕ್ಕೆ ಅವಕಾಶ ಕೊಡದಿದ್ದರೆ ಸರ್ಕಾರದ ಆದಾಯದ ಮೂಲ ಕಡಿಮೆ ಆಗಲಿದೆ. ನಷ್ಟದ ಪ್ರಮಾಣವು ಹೆಚ್ಚಲಿದೆ. ಆದ್ದರಿಂದ ರೆಡ್ ಝೋನ್ ಹೊರತುಪಡಿಸಿ ಕೇವಲ ಗ್ರೀನ್ ಹಾಗೂ ಯೆಲ್ಲೋ ಝೋನ್‍ನಲ್ಲಿ ಅಷ್ಟೇ ಮದ್ಯದಂಗಡಿಗೆ ಅನುಮತಿ ಕೊಡುವುದು ಹೇಗೆ ಎಂಬ ಗೊಂದಲದಲ್ಲಿ ಸರ್ಕಾರವು ಇದೆ ಎನ್ನಲಾಗುತ್ತಿದೆ.

ಇದೆಲ್ಲಾ ಆಗಬೇಕಾದರೆ ಮೊದಲು ಕೇಂದ್ರ ಸರ್ಕಾರ ಒಪ್ಪಬೇಕು. ಲಾಕ್‍ಡೌನ್‍ಗೆ ದೇಶಾದ್ಯಂತ ಒಂದೇ ನಿಯಮದ ಬದಲು ರಾಜ್ಯವಾರು ನಿರ್ಧಾರಕ್ಕೆ ಸಮ್ಮತಿಸಬೇಕು. ಕೇಂದ್ರದ ನಿರ್ಧಾರದ ಮೇಲೆ ರಾಜ್ಯದ ನಿರ್ಧಾರ ತೀರ್ಮಾನವಾಗಲಿದೆ. ಆದರೆ ಹಣಕಾಸಿನ ದೃಷ್ಟಿಯಿಂದ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟರೆ ಒಳಿತು ಎಂಬ ಲೆಕ್ಕಾಚಾರವಂತು ಸರ್ಕಾರದ ಮಟ್ಟದಲ್ಲಿ ನಡೆಯುತ್ತಿದೆ ಎಂಬ ಮಾಹಿತಿ ಲಭಿಸಿದೆ.

Comments

Leave a Reply

Your email address will not be published. Required fields are marked *