ವೀರಶೈವರ ಜೊತೆಗೆ ಲಿಂಗಾಯತರು ಸೇರಲ್ಲ: ಸಿದ್ದರಾಮ ಸ್ವಾಮೀಜಿ

ಬೆಳಗಾವಿ: ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಹಿಂದುತ್ವ ಪ್ರತಿಪಾದಕ ಪಕ್ಷದಿಂದ ವಿರೋಧ ವ್ಯಕ್ತವಾಗುತ್ತಿದೆ ಎಂದು ನಾಗನೂರು ರುದ್ರಾಕ್ಷಿ ಮಠದ ಡಾ. ಸಿದ್ದರಾಮ ಸ್ವಾಮೀಜಿಗಳು ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೈನ, ಸಿಖ್, ಬೌದ್ಧ ಧರ್ಮೀಯರು ಸ್ವತಂತ್ರವಾಗಿ ಪ್ರತ್ಯೇಕ ಧರ್ಮ ಮಾಡಿಕೊಂಡಿದ್ದಾರೆ. ಆದರೆ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಹಿಂದುತ್ವ ಪ್ರತಿಪಾದಕರು ಅಡ್ಡಿಪಡಿಸುತ್ತಿದ್ದಾರೆಂದು ಹೇಳಿದರು.

ಕೇಂದ್ರ ಸರ್ಕಾರಕ್ಕೆ ರಾಜ್ಯ ಕಳುಹಿಸಿರುವ ಶಿಫಾರಸ್ಸನ್ನು ಪ್ರಧಾನಿ ಮೋದಿ ಅವರು ಸಚಿವ ಸಂಪುಟದಲ್ಲಿ ಚರ್ಚಿಸಿ ಮಾನ್ಯತೆ ನೀಡಬೇಕು. ಈಗಾಗಲೇ ಕೇಂದ್ರ ಸರ್ಕಾರವು ವರದಿಯನ್ನು ವಾಪಸ್ ಕಳುಹಿಸಿದೆ ಎಂದು ಕೆಲವರಿಂದ ವದಂತಿ ಹರಡುತ್ತಿದೆ. ಇದರಿಂದ ಲಿಂಗಾಯತ ಪ್ರತ್ಯೆಕ ಧರ್ಮ ವಿರೋಧಿಗಳು ಸಂಭ್ರಮಿಸುತ್ತಿದ್ದಾರೆ. ಇದೆಲ್ಲ ಲಿಂಗಾಯತ ಚಳುವಳಿ ಡ್ಯಾಮೆಜ್ ಮಾಡಲು ಈ ರೀತಿಯ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಒಂದು ವೇಳೆ ಕೇಂದ್ರ ಸರ್ಕಾರ ಶಿಫಾರಸ್ಸು ವಾಪಸ್ ಕಳುಹಿಸಿದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.

ಕೇಂದ್ರ ಸರ್ಕಾರ ಪ್ರತ್ಯೇಕ ಧರ್ಮ ವಿರೋಧಿಸಿದ್ರೆ, ಮುಂದೆ ಲಿಂಗಾಯತರು ಅವರನ್ನ ವಿರೋಧಿಸುತ್ತಾರೆ. ಇದಕ್ಕೆ ನಿದರ್ಶನ ಕಾಂಗ್ರೆಸ್ 79 ಸ್ಥಾನ ಪಡೆಯಲು ಲಿಂಗಾಯತ ಹೋರಾಟದ ಪ್ರತಿಫಲವಾಗಿದೆ. ಲಿಂಗಾಯತ ಹೋರಾಟದಲ್ಲಿ ಪಾಲ್ಗೊಂಡಿದ್ದ ಕಾರಣ ಕೆಲವರು ಸೋತಿದ್ದಾರೆಂದು ಹೇಳಲಾಗುತ್ತಿದೆ. ಆದರೆ ಅದು ಅವರು ವೈಯಕ್ತಿಕ ಕಾರಣದಿಂದ ಸೋಲು ಅನುಭವಿಸಿದ್ದಾರೆ ಎಂದು ತಿಳಿಸಿದರು.

ಲಿಂಗಾಯತ ಹೋರಾಟದಲ್ಲಿ ಪಾಲ್ಗೊಂಡಿದ್ದ ಎಂ.ಬಿ. ಪಾಟೀಲ್, ಹಾಗೂ ಬಸವರಾಜ್ ಹೊರಟ್ಟಿಗೆ ಸಚಿವ ಸ್ಥಾನ ಕೈತಪ್ಪಲು ಕಾರಣವಾಗಿದೆ. ಹಿಗಾಗಿ ರಾಜ್ಯ ಸರ್ಕಾರ ಲಿಂಗಾಯತರನ್ನು ಮತ್ತು ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಬಾರದು. ಯಾವುದೇ ಕಾರಣಕ್ಕೂ ಲಿಂಗಾಯತ, ವೀರಶೈವರು ಒಂದಾಗೋದು ಸಾಧ್ಯವಿಲ್ಲ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *