ಬಿಜೆಪಿ ಸಚಿವರ ಮೇಲೂ ದಾಳಿ ಆಗಲಿ: ಸಚಿವ ಪ್ರಮೋದ್ ಮಧ್ವರಾಜ್

ಉಡುಪಿ: ಇಂಧನ ಸಚಿವ ಡಿಕೆ ಶಿವಕುಮಾರ್ ಮೇಲಿನ ಐಟಿ ದಾಳಿ ತಪ್ಪಲ್ಲ. ಆದ್ರೆ ಕೇವಲ ಕಾಂಗ್ರೆಸ್ ಸರ್ಕಾರವನ್ನೇ- ಕಾಂಗ್ರೆಸ್ ನ ಮಂತ್ರಿಗಳನ್ನೇ ಟಾರ್ಗೆಟ್ ಮಾಡುವುದು ಎಷ್ಟು ಸರಿ ಎಂದು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಐಟಿ ಇಲಾಖೆಯನ್ನು ಪ್ರಶ್ನೆ ಮಾಡಿದ್ದಾರೆ.

ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಪ್ರಮೋದ್ ಮಧ್ವರಾಜ್, ಒಂದೆರಡು ಬಿಜೆಪಿ ಸಚಿವರ ಮೇಲೂ ದಾಳಿ ಮಾಡಿ ಎಂದು ಸಲಹೆ ನೀಡಿದ್ದಾರೆ. ಇದು ರಾಜಕೀಯ ಪ್ರೇರಿತ ಮತ್ತು ದುರುದ್ದೇಶ ಪೂರಿತ ದಾಳಿ ಎಂದು ಬಣ್ಣಿಸಿದರು.

ಗುಜರಾತ್ ಶಾಸಕರು ಬೆಂಗಳೂರಿನಲ್ಲಿ ಬೀಡು ಬಿಟ್ಟಿರುವುದು ಕೇಂದ್ರ ಸರ್ಕಾರಕ್ಕೆ ಇರಿಸುಮುರುಸು ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಐಟಿ ದಾಳಿ ನಡೆದಿದೆ. ದಾಳಿ ಮಾಡಿದ್ದನ್ನು ವಿರೋಧಿಸಲ್ಲ. ಆದ್ರೆ ದಾಳಿ ಮಾಡಿದ ಟೈಂ ಸರಿಯಿಲ್ಲ. ಐಟಿ ದಾಳಿ ಹಿಂದೆ ಸಿಎಂ ಸಿದ್ದರಾಮಯ್ಯ ಇದ್ದಾರೆ ಎಂಬ ಡಿಕೆಶಿ ತಾಯಿ ಗೌರಮ್ಮ ಗಂಭೀರ ಆರೋಪದ ಬಗ್ಗೆ ನಾನು ಪ್ರತಿಕ್ರಿಯೆ ಕೊಡಲ್ಲ. ಅವರು ರಾಜಕೀಯವಾಗಿ ಎಷ್ಟು ಪರಿಪಕ್ವರು ಎಂಬುವುದು ನನಗೆ ಗೊತ್ತಿಲ್ಲ ಎಂದು ಹೇಳಿದರು.

ಪ್ರಾಮಾಣಿಕ ಮಂತ್ರಿಗಳು- ಶಾಸಕರು ಸರಿಯಾಗಿ ಟ್ಯಾಕ್ಸ್ ಕಟ್ಟಿದವರು ನಿಶ್ಚಿಂತೆಯಿಂದ ನಿದ್ದೆ ಮಾಡಬಹುದು. ಯಾರೂ ಚಿಂತಿಸಬೇಕಾದ ಅಗತ್ಯವೇ ಇಲ್ಲ. ನೋಟ್ ಬ್ಯಾನ್ ಆದಾಗ ನನ್ನ ಬಳಿ ಕೇವಲ ಐದು ಸಾವಿರ ರೂಪಾಯಿ ಹಳೆ ನೋಟ್ ಇತ್ತು ಎಂದರು.

 

Comments

Leave a Reply

Your email address will not be published. Required fields are marked *