ರಾಹುಲ್ ಗಾಂಧಿ ಕರ್ನಾಟಕದಿಂದಲೇ ಸ್ಪರ್ಧೆ ಮಾಡಲಿ: ದಿನೇಶ್ ಗುಂಡೂರಾವ್

ಚಾಮರಾಜನಗರ: ಎಐಸಿಸಿ ಅಧಕ್ಷ ರಾಹುಲ್ ಗಾಂಧಿ ಅವರು ಕರ್ನಾಟಕದಿಂದಲೇ ಸ್ಪರ್ಧೆ ಮಾಡುವಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಹ್ವಾನ ಕೊಟ್ಟಿದ್ದಾರೆ.

ಚಾಮರಾಜನಗರದಲ್ಲಿ ನಡೆದ ಕಾಂಗ್ರೆಸ್ ಪರಿವರ್ತನಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿಯವರು ಕೇವಲ ಉತ್ತರ ಭಾರತದಿಂದ ಮಾತ್ರ ಸ್ಪರ್ಧೆ ಮಾಡುವುದಲ್ಲ. ದಕ್ಷಿಣ ಭಾರತದಿಂದಲೂ ಸ್ಪರ್ಧೆ ಮಾಡಲಿ. ಅದರಲ್ಲೂ ಕರ್ನಾಟಕದಿಂದಲೇ ಸ್ಪರ್ಧೆ ಮಾಡಲಿ ಎಂದು ಹೇಳಿ ಆಹ್ವಾನ ನೀಡಿದರು.

ಈ ಹಿಂದೆ ಇಂದಿರಾ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರನ್ನು ನಾವು ಆಯ್ಕೆ ಮಾಡಿದ್ದೇವು. ಈಗ ರಾಹುಲ್ ಗಾಂಧಿಯನ್ನು ಆಯ್ಕೆ ಮಾಡಿ ಪ್ರಧಾನ ಮಂತ್ರಿಯನ್ನಾಗಿ ಮಾಡೋಣ ಎಂದು ಹೇಳಿದರು.

ಐದು ವರ್ಷಗಳ ನಂತರ ಮೋದಿ ರಿಪೋರ್ಟ್ ಕಾರ್ಡ್ ಶೂನ್ಯವಾಗಿದೆ. ಮೋದಿಯವರು ಕೇವಲ ಭಾಷಣ ಮತ್ತು ಪ್ರಚಾರ ಮಾಡುತ್ತಿದ್ದಾರೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಶೇ. 7ರಷ್ಟು ತಾಂಡವಾಡುತ್ತಿದೆ. ಕಪ್ಪು ಹಣ ತರುವುದಾಗಿ ಹೇಳಿ ಜನರಿಗೆ ಮೋಸ ಮಾಡಿದ್ದಾರೆ. ಮೋದಿಯನ್ನು ಯಾವುದೇ ಕಾರಣಕ್ಕೂ ಪ್ರಶ್ನೆ ಮಾಡುವಂತಿಲ್ಲ. ಏಕೆಂದರೆ ಪ್ರಶ್ನೆ ಮಾಡಿದರೆ ದೇಶ ದ್ರೋಹಿಗಳು ಎಂದು ಹೇಳುತ್ತಿದ್ದಾರೆ ಎಂದರು.

ಮೋದಿಯವರಿಂದ ಸಾಧನೆ ಏನೂ ಇಲ್ಲ ಬರೀ ಭಾವನೆ. ಉಜ್ವಲ ಯೋಜನೆ ಒಂದು ಬೋಗಸ್. ಯಾವ ಮಹಿಳೆಗೂ ಉಚಿತವಾಗಿ ಕೊಟ್ಟಿಲ್ಲ. ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಹೆಚ್ಚಳವಾಗಿದೆ. ಪಾಕಿಸ್ತಾನದ ಮೇಲೆ ದಾಳಿ ಮಾಡಿ ಗೆಲ್ಲಲು ಹೊರಟಿದ್ದಾರೆ. ದೇಶದ ರಕ್ಷಣೆಗಾಗಿ ಚೆಲ್ಲಿದ ರಕ್ತದ ಮೇಲೆ ಬಿಜೆಪಿ ಇಂದು ಗೆಲ್ಲಲು ಹೊರಟಿದೆ. 2014ರಲ್ಲಿ ಜಮ್ಮು ಕಾಶ್ಮೀರ ಶಾಂತಯುತವಾಗಿ ಇತ್ತು ಹಾಗೂ ಎಂಎಲ್‍ಎ ಮತ್ತು ಎಂಪಿ ಚುನಾವಣೆ ನಡೆದಿತ್ತು. ಆದರೆ ಇಂದು ಕಾಶ್ಮೀರದಲ್ಲಿ ಚುನಾವಣೆ ಮಾಡಲು ಆಗುತ್ತಿಲ್ಲ. ಐದು ವರ್ಷದಲ್ಲಿ ಒಂದು ಸರ್ಕಾರ ಕೊಡಲು ಸಾಧ್ಯವಾಗದೇ ಅಶಾಂತಿ ನೆಲೆಸುವಂತೆ ಮಾಡಿದ್ದಾರೆ. ಸದ್ಯ ಮೈತ್ರಿ ಕರ್ನಾಟಕದಲ್ಲಿ 22ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *