KSRTCಗೆ ತಟ್ಟಿದ ಕೊರೊನಾ ಭೀತಿ – ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖ

ಬೆಂಗಳೂರು: ದಿನದಿಂದ ದಿನಕ್ಕೆ ಕೊರೊನಾ ಭೀತಿ ಹೆಚ್ಚಾಗುತ್ತದೆ. ಕೊರೊನಾ ಭೀತಿಯಿಂದ ವ್ಯಾಪಾರ, ವಹಿವಾಟಿನ ಮೇಲೆ ಗಣನೀಯವಾಗಿ ಪ್ರಭಾವ ಬೀರುತ್ತಿದೆ. ಹೀಗಾಗಿ ತರಕಾರಿ, ಚಿಕನ್, ಮಟನ್ ಸೇರಿದಂತೆ ಆನೇಕ ವಸ್ತುಗಳ ಮಾರಾಟದ ಮೇಲೆ ಪರಿಣಾಮ ಬೀರಿ ವ್ಯಾಪಾರದಲ್ಲಿ ಕಡಿಮೆ ಆಗಿದೆ. ಈಗ ಕೆಎಸ್ಆರ್‌ಟಿಸಿ ಮತ್ತು ಬಿಎಂಟಿಸಿಗೂ ಇದರ ಭೀತಿ ತಟ್ಟಿರುವುದು ಪ್ರಮುಖವಾಗಿ ಗೊತ್ತಾಗುತ್ತಿದೆ. ಕೊರೊನಾ ಭೀತಿಯಿಂದ ಕೆಎಸ್ಆರ್‌ಟಿಸಿ ಪ್ರಯಾಣಿಕರಲ್ಲಿ ಗಣನೀಯವಾಗಿ ಇಳಿಕೆ ಆಗಿದೆ.

ಬೆಂಗಳೂರಿನಲ್ಲಿ 4 ಜನರಿಗೆ ಕೊರೊನಾ ಪತ್ತೆಯಾದ ಹಿನ್ನೆಲೆಯಲ್ಲಿ ಮೆಜೆಸ್ಟಿಕ್‍ನ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಲ್ಲದೇ ಬಹುತೇಕ ಬಸ್‍ಗಳು ಖಾಲಿ ಖಾಲಿ ಆಗಿವೆ. ಅದರಲ್ಲೂ ವೋಲ್ವೋ ಮತ್ತು ರಾಜಹಂಸ ಕೆಎಸ್ಆರ್‌ಟಿಸಿಯಲ್ಲಿ 15%ರಿಂದ 20% ಪ್ರಯಾಣಿಕರ ಸಂಖ್ಯೆ ಇಳಿಕೆ ಆಗಿದೆ. ಕೊರೊನಾ ಭೀತಿಯಿಂದ ಕಳೆದ ಒಂದು ವಾರದಿಂದ ಬಸ್ ಪ್ರಯಾಣಿಕರ ಸಂಖ್ಯೆ ಭಾರೀ ಇಳಿಕೆಯಾಗಿದೆ.

ರಾಜಹಂಸ, ಫ್ಲೈಸ್ ಹಾಗೂ ವೋಲ್ವೋ ಬಸ್ಸಿನತ್ತ ಜನರು ಮುಖ ಮಾಡುತ್ತಿಲ್ಲ. ಹೀಗಾಗಿ ಆದಾಯದಲ್ಲಿ ಶೇ. 20ರಷ್ಟು ಇಳಿಕೆ ಕಂಡಿದೆ. ಪ್ರಯಾಣಿಕರ ಇಳಿಕೆಗೆ ಕೆಎಸ್ಆರ್‌ಟಿಸಿ ಅಧಿಕಾರಿಗಳು ತಲೆಕೆಡಿಸಿಕೊಂಡಿದ್ದಾರೆ. ಮಾರ್ಚ್ 03ರಿಂದ ಪ್ರಯಾಣಿಕರ ಸಂಖ್ಯೆ ಇಳಿಕೆ ಆಗಿದೆ ಎಂದು ಕೆಎಸ್ಆರ್‌ಟಿಸಿ ಸಂಚಾರಿ ವಿಭಾಗದ ಮುಖ್ಯಸ್ಥ ಪ್ರಭಾಕರ್ ರೆಡ್ಡಿ ಮಾಹಿತಿ ನೀಡಿದ್ದಾರೆ.

ಕೊರೊನಾ ಭೀತಿ ಹಿನ್ನೆಲೆ ಕೆಎಸ್ಆರ್‌ಟಿಸಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಏರ್‌ಪೋರ್ಟ್‌, ಮಂಗಳೂರು, ಹೈದರಾಬಾದ್ ಕಡೆ ಹೋಗುವ ಬಸ್‍ಗಳಲ್ಲಿ ಹೆಚ್ಚಿನ ಮುಂಜಾಗ್ರತೆ ವಹಿಸಲಾಗಿದೆ. ಜನರಿಗೆ ಕೊರೊನಾ ಬಗ್ಗೆ ಅರಿವು ಮೂಡಿಸಲು ವೈರಸ್ ಬಗ್ಗೆ ಮಂಜಾಗ್ರತೆ ಇರುವ ಸಂದೇಶ ಪ್ರಕಟಣೆ ಮಾಡಿದ್ದಾರೆ. ಚಾಲಕ ಹಾಗೂ ನಿರ್ವಾಹಕರಿಗೂ ಎಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ. ಪ್ರಯಾಣಿಕರಿಗೆ ಹೆಚ್ಚು ಎಸಿ ಬಸ್ ಬಳಸದಂತೆ ಮನವರಿಕೆ ಮಾಡಿ ಎಸಿ ಬದಲಿಗೆ ನಾನ್ ಎಸಿ ಬಸ್ ಬಳಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *