ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರಿಗೆ 36 ಜನರ ಲಿಸ್ಟ್‌ ರೆಡಿ – ಪೊಲೀಸರಿಂದ ಕಾನೂನು ಪ್ರಕ್ರಿಯೆ ಶುರು!

ಮಂಗಳೂರು: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ಹಿಂದೂ ಮುಖಂಡರು ಹಾಗೂ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಾದ ಬೆನ್ನಲ್ಲೇ ಬಿಜೆಪಿ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ ಸೇರಿದಂತೆ ಒಟ್ಟು 36 ಜನರ ಗಡಿಪಾರಿಗೆ ಪೊಲೀಸ್‌ ಇಲಾಖೆ ಕಾನೂನು ಪ್ರಕ್ರಿಯೆ ಶುರು ಮಾಡಿದೆ.

ಬಂಟ್ವಾಳ ನಗರ, ಬಂಟ್ವಾಳ ಗ್ರಾಮಾಂತರ, ಪುತ್ತೂರು ನಗರ, ಪುತ್ತೂರು ಗ್ರಾಮಾಂತರ, ವಿಟ್ಲ, ಸುಳ್ಯ, ಬೆಳ್ಳಾರೆ, ಬೆಳ್ತಂಗಡಿ, ಪುಂಜಾಲಕಟ್ಟೆ, ಕಡಬ, ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿನ 15 ಜನ ಮುಸ್ಲಿಮರು ಸೇರಿದಂತೆ ಒಟ್ಟು 36 ಜನರನ್ನ ಗಡಿಪಾರು ಮಾಡಲು ಪೊಲೀಸ್‌ ಇಲಾಖೆ ಮುಂದಾಗಿದೆ. ಭರತ್ ಕುಮ್ಡೇಲು, ಮಹೇಶ್ ಶೆಟ್ಟಿ ತಿಮರೋಡಿ ಕೂಡ ಗಡಿಪಾರು ಲಿಸ್ಟ್‌ನಲ್ಲಿದ್ದಾರೆ. ಇದನ್ನೂ ಓದಿ: ರಾಕೇಶ್‌ ಪೂಜಾರಿ ನಿವಾಸಕ್ಕೆ ರಿಷಬ್‌ ಶೆಟ್ಟಿ ದಂಪತಿ ಭೇಟಿ – ತಾಯಿ, ತಂಗಿಗೆ ಸಾಂತ್ವನ ಹೇಳಿದ ನಟ

ಸಾಲು ಸಾಲು ಹತ್ಯೆಗಳಿಂದ ಪ್ರಕ್ಷುಬ್ಧಗೊಂಡಿದ್ದ ದಕ್ಷಿಣ ಕನ್ನಡದಲ್ಲೀಗ.. ಆಪರೇಷನ್ ಶಾಂತಿ ಶುರುವಾಗಿದೆ. ಮಂಗಳೂರಿನಲ್ಲಿ ಕಳೆದ ವಾರ ಮುಸ್ಲಿಂ ಯುವಕ ಅಬ್ದುಲ್ ರಹಿಮಾನ್ ಹತ್ಯೆ ಬಳಿಕ ದಕ್ಷಿಣ ಕನ್ನಡ ಸ್ವಲ್ಪಮಟ್ಟಿಗೆ ಉದ್ವಿಗ್ನಗೊಂಡಿತ್ತು. ಬೆನ್ನಲ್ಲೇ ಮಂಗಳೂರು ಕಮಿಷನರ್, ದಕ್ಷಿಣ ಕನ್ನಡ ಎಸ್‌ಪಿಯನ್ನು ಸರ್ಕಾರ ಬದಲಿಸಿತ್ತು. ಇದೀಗ ಆರೋಪಿಗಳಿಗೆ ಸಹಕರಿಸುವ, ಆಶ್ರಯ ನೀಡುವ ಎಲ್ಲರನ್ನೂ ನಾವು ಆರೋಪಿಗಳೇ ಎಂದು ಪರಿಗಣಿಸುತ್ತೇವೆ ಅಂತ ಇಬ್ಬರೂ ಎಚ್ಚರಿಕೆ ಕೊಟ್ಟಿದ್ದರು. ಇದನ್ನೂ ಓದಿ:  ಕಲ್ಲಡ್ಕ ಪ್ರಭಾಕರ್ ಭಟ್ ಸೇರಿ 15 ಜನರ ವಿರುದ್ಧ ಎಫ್‌ಐಆರ್; ಕೇಸ್ ವಾಪಸ್ ಪಡೆಯಲು ಬಿಜೆಪಿ ಒತ್ತಾಯ

ಬೆನ್ನಲ್ಲೇ ಶಾಂತಿ ಕದಡುವವರ ವಿರುದ್ಧ ಎಫ್‌ಐಆರ್‌ಗಳು ದಾಖಲಾಗ್ತಿವೆ. ಆದರೆ, ಕಾಂಗ್ರೆಸ್ ಸರ್ಕಾರ ಬಿಜೆಪಿ ಶಾಸಕರು, ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡ್ತಿದೆ ಅನ್ನೋ ಆರೋಪ ಜೋರಾಗಿದೆ. ದಕ್ಷಿಣ ಕನ್ನಡ, ತುಮಕೂರು ಹಾಗೂ ಹುಬ್ಬಳ್ಳಿಯಲ್ಲಿ ಸರ್ಕಾರ ನಡೆ ದ್ವೇಷ ರಾಜಕೀಯ ಅಂತ ಬಿಜೆಪಿ ಕೆಂಡಕಾರಿದೆ. ಇದನ್ನೂ ಓದಿ: ಶಾಲೆಗಳ ಸಹಯೋಗದಲ್ಲಿ ಬೆಂಗಳೂರು ಹವಾಮಾನ ಕಾರ್ಯಯೋಜನೆ ಕ್ಲಬ್‌ಗಳ ರಚನೆ: ಡಿ.ಕೆ ಶಿವಕುಮಾರ್