ದೆಹಲಿ ಆಸ್ಪತ್ರೆಯಲ್ಲೇ ಕನಕಪುರ ಬಂಡೆಗೆ ಚಿಕಿತ್ಸೆ- ಇಡಿ ಮುಂದೆ ಲಕ್ಷ್ಮಿ ಹೆಬ್ಬಾಳ್ಕರ್

ನವದೆಹಲಿ: ಇಡಿ ಬಂಧನದಲ್ಲಿರುವ ಮಾಜಿ ಡಿ.ಕೆ.ಶಿವಕುಮಾರ್ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಇಂದು ಸಹ ಕೋರ್ಟಿನಲ್ಲಿ ನಡೀತಿರುವ ವಾದ-ಪ್ರತಿವಾದ ಇವತ್ತೂ ಮುಂದುವರಿಯಲಿದೆ. ಇತ್ತ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಇಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ.

ಬುಧವಾರ ಡಿಕೆಶಿ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರು. ಆದರೆ ಇಡಿ ಪರ ವಕೀಲ ಹೆಚ್ಚುವರಿ ಸಾಲಿಸಿಟರ್ ಜನರಲ್ ನಟರಾಜ್ ಹಾಜರಾಗಿರಲಿಲ್ಲ. ಹೀಗಾಗಿ ನ್ಯಾಯಾಧೀಶ ಅಜಯ್‍ಕುಮಾರ್ ಕುಹರ್ ವಿಚಾರಣೆಯನ್ನ ಇವತ್ತಿಗೆ ಮುಂದೂಡಿದ್ದಾರೆ. ಜಾಮೀನು ಕೋರಿ ಡಿಕೆಶಿ ಪರ ವಕೀಲರ ವಾದಕ್ಕೆ ಇಡಿ ವಕೀಲರು ಪ್ರತಿವಾದ ಮಂಡಿಸಬೇಕಿದೆ.

ಒಂದು ವೇಳೆ ಇವತ್ತೂ ವಾದ-ಪ್ರತಿವಾದ ಮುಂದುವರಿಯಬಹುದು ಅಥವಾ ವಾದ-ಪ್ರತಿವಾದ ಮುಗಿದು ಇವತ್ತೇ ಡಿಕೆಶಿಗೆ ಜಾಮೀನು ನೀಡಬಹುದು ಇಲ್ಲವೇ ಜಾಮೀನು ಅರ್ಜಿ ತಿರಸ್ಕರಿಸಬಹುದು ಅಥವಾ ಆದೇಶವನ್ನ ಕಾಯ್ದಿರಿಸಬಹುದು. ಈಗಾಗಲೇ ಡಿಕೆಶಿವಕುಮಾರ್ ಅವರನ್ನ ಅಕ್ಟೋಬರ್ 1ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಆದೇಶಿಸಿದೆ.

ಶನಿವಾರದಿಂದ ದೆಹಲಿಯ ಆರ್‍ಎಂಎಲ್ ಆಸ್ಪತ್ರೆಯಲ್ಲೇ ಇರುವ ಡಿಕೆ ಶಿವಕುಮಾರ್ ಆರೋಗ್ಯ ಸುಧಾರಿಸಿಲ್ಲ. ರಕ್ತದೊತ್ತಡ, ಎದೆನೋವು, ಕೆಮ್ಮು ಕಾರಣದಿಂದ ಹೃದ್ರೋಗ ತೀವ್ರ ನಿಗಾ ಘಟಕದಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಒಂದು ವೇಳೆ ಆರೋಗ್ಯ ಸುಧಾರಿಸಿದರೆ ಇವತ್ತೇ ತಿಹಾರ್ ಜೈಲಿಗೆ ಶಿಫ್ಟ್ ಮಾಡುವ ಸಾಧ್ಯತೆಗಳಿವೆ.

ಅತ್ತ ಡಿಕೆ ಶಿವಕುಮಾರ್ ಜಾಮೀನಿಗಾಗಿ ಒದ್ದಾಡುತ್ತಿದ್ರೆ ಇತ್ತ ಇವತ್ತು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಇಡಿ ಎದುರು ವಿಚಾರಣೆಗೆ ಹಾಜರಾಗಬೇಕಿದೆ. ಸಾಕ್ಷಿಯಾಗಿ ವಿಚಾರಣೆಗೆ ಬರುವಂತೆ ಸಮನ್ಸ್ ನೀಡಲಾಗಿತ್ತು. ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಅವರ ಸಹೋದರ ಚನ್ನರಾಜು ಮೂಲಕ ಡಿಕೆಶಿ ಬೇನಾಮಿ ಹೂಡಿಕೆ ಮಾಡಿದ್ದಾರೆ ಅನ್ನೋ ಗುಮಾನಿ ಇಡಿಯದ್ದು. ಸಾಕ್ಷಿಯಾಗಿ ಪರಿಗಣಿಸಿರುವ ಕಾರಣ ತಮ್ಮ ರಾಜಕೀಯ ಗುರುವಿನ ವಿರುದ್ಧವೇ ಬೆಳಗಾವಿ ಗ್ರಾಮೀಣ ಶಾಸಕಿ ಸಾಕ್ಷ್ಯ ಹೇಳ್ತಾರಾ ಅನ್ನೋದು ಕುತೂಹಲ ಸೃಷ್ಟಿಸಿದೆ.

Comments

Leave a Reply

Your email address will not be published. Required fields are marked *