ಜಾಮೀನು ಕೊಡಿಸಿದ ವಕೀಲರಿಗೆ ಹಣ ನೀಡಲು ಮನೆಗಳ್ಳತನ- ಇಬ್ಬರು ಅರೆಸ್ಟ್

– 8 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ

ಬೆಂಗಳೂರು: ಜಾಮೀನು ಕೊಡಿಸಿದ ವಕೀಲರಿಗೆ ಹಣ ನೀಡುವುದಕ್ಕಾಗಿ ಮನೆಗಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಸಯ್ಯದ್ ಅಲಿಯಾಸ್ ಇಮ್ರಾನ್ ಕಾಲು, ವಸೀಮ್ ಅಕ್ರಮ್ ಅಲಿಯಾಸ್ ಬ್ಲೇಡ್ ವಸೀಮ್ ಬಂಧಿತ ಆರೋಪಿಗಳು. ಕೋರಮಂಗಲ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, 8 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿಕೊಂಡಿದ್ದಾರೆ.

ಸಯ್ಯದ್ ಹಾಗೂ ವಸೀಮ್ ಸೇರಿ ಈ ಹಿಂದೆ ಹಲವು ಕಡೆ ಮನೆಗಳ್ಳತನ ಮಾಡಿ ಜೈಲಿಗೆ ಹೋಗಿದ್ದರು. ಆದರೆ ಆರೋಪಿಗಳಿಗೆ ವಕೀಲರೊಬ್ಬರು ಜಾಮೀನು ಕೊಡಿಸಿ, ಹೊರಗೆ ತಂದಿದ್ದರು. ಇದರಿಂದಾಗಿ ವಕೀಲರ ಋಣ ತೀರಿಸಲು ಸಯ್ಯದ್ ಹಾಗೂ ವಸೀಮ್ ಮುಂದಾಗಿದ್ದರು. ಆದರೆ ಇಬ್ಬರ ಬಳಿಯೂ ಹಣ ಇರಲಿಲ್ಲ. ಹೀಗಾಗಿ ಮತ್ತೆ ಕಳ್ಳತನ ಮಾಡಿ, ಚಿನ್ನಾಭರಣ ಮಾರುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಆರೋಪಿಗಳು ಕಳವು ಮಾಡಿದ್ದ ಚಿನ್ನಾಭರಣ ಮಾರಾಟ ಮಾಡಿ, ವಕೀಲರಿಗೆ ಶುಲ್ಕ ಪಾವತಿಸಿ ಉಳಿದ ಹಣವನ್ನು ದುಶ್ಚಟಗಳಿಗೆ ಬಳಸಿಕೊಳ್ಳುತ್ತಿದ್ದರು. ಕೇವಲ ಕೋರಮಂಗಲ ಅಷ್ಟೇ ಅಲ್ಲದೆ ಆಡುಗೋಡಿ, ತಿಲಕ್‍ನಗರ, ಬೊಮ್ಮನಹಳ್ಳಿ ಸೇರಿದಂತೆ 6ಕ್ಕೂ ಹೆಚ್ಚು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ.

ಬಂಧಿತ ಸಯ್ಯದ್ ಹಾಗೂ ವಸೀಮ್ ವಿರುದ್ಧ ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *