ಮಂಗ್ಳೂರು – ಬೆಂಗ್ಳೂರು ಮಧ್ಯೆ ಸಂಚರಿಸುವ ಎಲ್ಲ ರೈಲು ಸಂಪೂರ್ಣ ರದ್ದು

ಮಂಗಳೂರು/ಮಂಡ್ಯ: ಕರಾವಳಿ ಜಿಲ್ಲೆಗಳಲ್ಲಿ ಕಳೆದೆರಡು ದಿನಗಳಲ್ಲಿ ಭಾರೀ ಮಳೆಯಾಗಿದ್ದು, ಇಂದು ಕೂಡ ಮಳೆ ಮುಂದುವರಿದಿದೆ.

ಮಳೆಯ ಕಾರಣದಿಂದ ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲೆ, ಕಾಲೇಜಿಗೆ ರಜೆ ನೀಡಲಾಗಿತ್ತು. ತೀರ ಪ್ರದೇಶಕ್ಕೆ ಸೀಮಿತವಾಗಿದ್ದ ಮಳೆಯ ಪ್ರತಾಪ ಈಗ ಒಳನಾಡಿಗೂ ಪಸರಿಸಿದ್ದು ಪಶ್ಚಿಮ ಘಟ್ಟಗಳ ತಪ್ಪಲು ಮಲೆನಾಡು ಭಾಗದಲ್ಲೂ ಮಳೆಯಾಗುತ್ತಿದೆ. ಇದರಿಂದಾಗಿ ಪಶ್ಚಿಮಕ್ಕೆ ಹರಿಯುವ ಕುಮಾರಧಾರಾ, ನೇತ್ರಾವತಿ, ಫಲ್ಗುಣಿ ನದಿಗಳು ತುಂಬಿಕೊಂಡು ಹರಿಯತೊಡಗಿದೆ.

ಹವಾಮಾನ ಇಲಾಖೆ ಅಂದಾಜಿನ ಪ್ರಕಾರ, ಇನ್ನೂ ಎರಡು ದಿನ ಮಳೆಯಾಗಲಿದ್ದು, ವಿಕೋಪ ನಿರ್ವಹಣೆಗೆ ಜಿಲ್ಲಾಡಳಿತ ಎಲ್ಲ ರೀತಿಯಲ್ಲಿ ಸಜ್ಜಾಗಿದೆ. ಇದೇ ವೇಳೆ ಮಂಗಳೂರು – ಬೆಂಗಳೂರು ಸಂಚರಿಸುವ ಎಲ್ಲ ರೀತಿಯ ರೈಲುಗಳನ್ನು ಸಂಪೂರ್ಣ ರದ್ದುಪಡಿಸಲಾಗಿದೆ.

ಕೇರಳದ ಕಣ್ಣೂರು ಮತ್ತು ಕಾರವಾರದಿಂದ ಬೆಂಗಳೂರಿಗೆ ಹೋಗುವ ರೈಲು ಸೇವೆಯನ್ನು ಮಂಗಳೂರಿನವರೆಗೆ ಮಾತ್ರ ನಡೆಸಲಾಗುತ್ತಿದೆ. ಇದರಿಂದ ರೈಲು ಪ್ರಯಾಣಿಕರು ಸಂಕಷ್ಟ ಪಡುವಂತಾಗಿದೆ. ಇಂದು ಬಹುತೇಕ ಜಿಟಿ ಜಿಟಿ ಮಳೆಯಾಗಿದ್ದು, ದೊಡ್ಡ ಮಟ್ಟದ ನಾಶ, ನಷ್ಟ ಸಂಭವಿಸಿಲ್ಲ.

ಇತ್ತ ಮಂಡ್ಯದಲ್ಲೂ ಸೋನೆ ಮಳೆ ಆರಂಭವಾಗಿದೆ. ಸತತ ಎರಡನೇ ದಿನವೂ ಮಂಡ್ಯದಲ್ಲಿ ಮಳೆಯ ಸಿಂಚನವಾಗುತ್ತಿದೆ. ಸೋಮವಾರ ಸಂಜೆ ಸುಮಾರು 1 ಗಂಟೆ ಕಾಲ ಮಂಡ್ಯದಲ್ಲಿ ಸಾಧಾರಣ ಮಳೆಯಾಗಿತ್ತು. ಮಂಗಳವಾರ ಹಲವು ಪ್ರದೇಶಗಳಲ್ಲಿ ಮಳೆಯಾಗಿದೆ.

Comments

Leave a Reply

Your email address will not be published. Required fields are marked *