ಮಿಲಿಟರಿ ಸೇನೆಗೆ 206 ಎಕರೆ ಭೂಮಿ ನೀಡಲು ಮುಂದಾದ ಬಿಬಿಎಂಪಿ

ಬೆಂಗಳೂರು: ನಗರದ ಹೊರವಲಯದ ಆನೇಕಲ್ ತಾಲೂಕಿನ ತಮ್ಮನಾಯಕನ ಹಳ್ಳಿಯಲ್ಲಿರುವ ಸರ್ಕಾರಿ ಗೋಮಾಳ ಭೂಮಿಯನ್ನು ಮಿಲಿಟರಿ ಸೇನೆಗೆ ನೀಡಲು ಬಿಬಿಎಂಪಿ ಮುಂದಾಗಿದೆ.

ಶುಕ್ರವಾರ ಬೆಳಗ್ಗೆ ಬಿಬಿಎಂಪಿ ಮೇಯರ್ ಸಂಪತ್ ರಾಜ್, ಆಯುಕ್ತರ ಮಂಜುನಾಥ್ ಪ್ರಸಾದ್, ಜಿಲ್ಲಾದಿಕಾರಿಗಳಾದ ವಿಜಯ ಶಂಕರ್ ಮತ್ತು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಮಹೇಂದ್ರ ಜೈನ್ ಸ್ಥಳಕ್ಕೆ ಭೇಟಿ ನೀಡಿ ಈ ವಿಚಾರವಾಗಿ ಪರೀಶಿಲನೆ ನಡೆಸಿದ್ದಾರೆ. ತಮ್ಮನಾಯಕನಹಳ್ಳಿ ಸರ್ವೆ ನಂ 23 ರಲ್ಲಿನ 206 ಎಕರೆ ಜಾಗವನ್ನ ಮಿಲಿಟರಿಗೆ ಹಸ್ತಾಂತರ ಮಾಡಲು ಅಧಿಕಾರಿಗಳು ಆಗಮಿಸಿದ್ದು, ಇದಕ್ಕೆ ಸ್ಥಳೀಯ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ರೈತರು ಇದೇ ಗೊಮಾಳ ಜಾಗದಲ್ಲಿ ಸುಮಾರು ಮೂವತ್ತು ವರ್ಷಗಳಿಂದ ಕೃಷಿ ಮಾಡುತ್ತಿದ್ದರು. ನಂತರ ಈ ಜಾಗವನ್ನು ಬಿಬಿಎಂಪಿ ಕಸ ವಿಲೇವಾರಿಗೆಂದು ಗುರುತಿಸಿತ್ತು. ಆದರೆ ಸ್ಥಳೀಯರು ಕೃಷಿ ಚಟುವಟಿಕೆ ನಡೆಸುತ್ತಿದ್ದ ಜೊತೆಗೆ ಈ ಜಾಗ ಬನ್ನೇರುಘಟ್ಟ ಅಭಯಾರಣ್ಯಕ್ಕೆ ಹೊಂದಿಕೊಂಡಿರುವುದರಿಂದ ಕಸ ಹಾಕುವ ಯೋಜನೆ ಕೈ ಬಿಟ್ಟು ಇದೀಗ ಸೇನೆಗೆ ಒಪ್ಪಿಸಲು ಬಿಬಿಎಂಪಿ ಮುಂದಾಗಿದೆ. ಆದ್ರೆ ಜಾಗವನ್ನು ಮಿಲಿಟರಿಗೆ ನೀಡಲು ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಮುಂದಿನ ದಿನಗಳಲ್ಲಿ ಈ ಪ್ರಕ್ರಿಯೆ ಮುಂದುವರಿದರೆ ರೈತರು ಸಿಎಂ ಕುಮಾರಸ್ವಾಮಿ ಹಾಗೂ ಡಿಸಿ ಅವರ ಕಚೇರಿಗೆ ಮುತ್ತಿಗೆ ಹಾಕಿ ಹೋರಾಟ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ. ಸುತ್ತಮುತ್ತಲಿನ ಜಮೀನುಗಳಲ್ಲಿ ರೈತರಿಗೆ ಸೇರಿದ ಜಾಗವನ್ನು ಗುರುತಿಸದೆ, ಬಿಬಿಎಂಪಿ ಸೇನೆಗೆ ಒಪ್ಪಿಸಲು ರೈತರಿಗೆ ದಿಕ್ಕು ತೋಚದಂತಾಗಿದೆ. ಇದರಿಂದ ರೈತರು ನಾವು ಸಾಯೋದಕ್ಕೂ ರೆಡಿ ಆದರೆ ನಾವು ಮೂವತ್ತು ವರ್ಷಗಳಿಂದ ಕೃಷಿ ಮಾಡಿಕೊಂಡು ಬಂದಿರುಂತಹ ಜಮೀನನ್ನು ಬಿಟ್ಟು ಕೊಡುವುದಿಲ್ಲ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *