ಪಂಚಾಯಿತಿ ಅಧಿಕಾರಿಗಳ ಗೋಲ್ಮಾಲ್ – ಬಡವರಿಗೆ ಸೇರಬೇಕಿದ್ದ ಜಮೀನು ಖಾಸಗಿ ವ್ಯಕ್ತಿ ಪಾಲು

– ಕೋಟ್ಯಂತರ ರೂ. ಜಮೀನು ಖಾಸಗಿಯವರಿಗೆ

ಬೀದರ್: ಸರ್ಕಾರ ಬಡ ಫಲಾನುಭವಿಗಳಿಗೆ ನೀಡಿದ್ದ ಸಿ-ಫಾರ್ಮ್ ಜಮೀನನ್ನು ಪಂಚಾಯಿತಿ ಅಧಿಕಾರಿಗಳು ಖಾಸಗಿ ವ್ಯಕ್ತಿ ಬಳಿ ಕೋಟ್ಯಂತರ ರೂ. ಹಣ ಪಡೆದು ಮಾರಿದ್ದಾರೆ ಎನ್ನುವ ಆರೋಪ ಬಸವಕಲ್ಯಾಣ ತಾಲೂಕಿನಲ್ಲಿ ಕೇಳಿಬಂದಿದೆ.

ಪಂಚಾಯತಿ ಅಧಿಕಾರಿಗಳ ಭಾರೀ ಗೋಲ್ಮಾಲ್ ನಿಂದ ಬಡ ಫಲಾನುಭವಿಗಳಿಗೆ ಸೇರಬೇಕಿದ್ದ ಸಿ-ಫಾರ್ಮ್ ಜಮೀನು ಖಾಸಗಿ ವ್ಯಕ್ತಿ ಪಾಲಾಗಿದ್ದು, ಪಂಚಾಯಿತಿ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ಸಿ-ಫಾರ್ಮ್ ಜಮೀನನ್ನು ಹಬೀಬಖಾನ್ ಎಂಬ ಖಾಸಗಿ ವ್ಯಕ್ತಿಗೆ ಪರಭಾರೆ ಮಾಡಿದ್ದು, ಬಸವಕಲ್ಯಾಣ ತಾಲೂಕಿನ ಸಸ್ತಾಪೂರ್ ಪಂಚಾಯತಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಜಮೀನು ರಾಷ್ಟ್ರೀಯ ಹೆದ್ದಾರಿ 9ರ ಬಳಿ ಇದ್ದು, ಕೋಟ್ಯಂತರ ಬೆಲೆ ಬಾಳುವ ಜಮೀನಾಗಿದೆ. ಹೀಗಾಗಿ ಪಿಡಿಓ ಚಂದ್ರಮ ಈ ಜಮೀನನ್ನು ಖಾಸಗಿ ವ್ಯಕ್ತಿ ಹೆಸರಿಗೆ ಪರಭಾರೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

ಖಾಸಗಿ ವ್ಯಕ್ತಿಗೆ ಪರಭಾರೆ ಮಾಡಿರುವ ಕುರಿತು ಪಹಣಿ ಕೂಡ ಲಭ್ಯವಾಗಿದ್ದು, ಸಿ- ಫಾರ್ಮ್ ನಲ್ಲಿ ಜಾಗ ಪಡೆದಿದ್ದ ಬಡ ಫಲಾನುಭವಿಗಳು ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ಬಡವರ ಜಮೀನು ಏಕಾಏಕಿ ಖಾಸಗಿ ವ್ಯಕ್ತಿ ಹೆಸರಿಗೆ ಮಾಡಿ ಅಧಿಕಾರಿಗಳು ಕೋಟ್ಯಂತರ ರೂ.ಗಳ ಗೋಲ್ಮಾಲ್ ಮಾಡಿದ್ದಾರೆ ಎಂದು ಫಲಾನುಭವಿಗಳು ನ್ಯಾಯ ಒದಗಿಸುವಂತೆ ಗೋಳಾಡುತ್ತಿದ್ದಾರೆ.

Comments

Leave a Reply

Your email address will not be published. Required fields are marked *