ರೈತರಿಗೆ ಅನ್ಯಾಯ ಆಗೋಕೆ ಬಿಡಲ್ಲ – ಸತೀಶ್ ಜಾರಕಿಹೊಳಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಟಾಂಗ್

ಬೆಳಗಾವಿ: ಸರ್ಕಾರದ ಯೋಜನೆಯಿಂದ ಅನ್ಯಾಯ ಆದರೆ ಆಗಲಿ, ತೊಂದರೆ ಆಗಿದ್ದರೆ ಸಹಿಸಿಕೊಳ್ಳಬೇಕೇ ವಿನಃ ಪರ್ಯಾಯ ಮಾರ್ಗವಿಲ್ಲ ಎಂದಿದ್ದ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಟಾಂಗ್ ಕೊಟ್ಟಿದ್ದಾರೆ.

ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಸರ್ಕಾರ ತೆಗೆದುಕೊಳ್ಳುವ ನಿರ್ಧಾರ ರೈತರ ವಿರುದ್ಧವಾಗಿದ್ದರೆ ನಾನು ನನ್ನ ರೈತರ ಪರ ನಿಲ್ಲುತ್ತೇನೆ. ಏಕಾಏಕಿ ರೈತರ ಅನುಮತಿ ಇಲ್ಲದೇ ಯಾವುದೇ ಯೋಜನೆ ಕೈಗೊಳ್ಳಲು ಆಗಲ್ಲ. ಆದ್ದರಿಂದ ಈ ಬಗ್ಗೆ ಕೂಗು ಎದ್ದಿದೆ ಎಂದರು.

ರೈತರ ಜಮೀನಿಗೆ ಕೇವಲ 3 ಲಕ್ಷ ರೂ. ಮಾತ್ರ ಮಾಡಿದ್ದು, 2009 ರಲ್ಲಿಯೇ ಇದರ ಅನುಮತಿ ಲಭಿಸಿದೆ. ಆದರೆ ಇಷ್ಟು ಕಡಿಮೆ ಹಣ ನೀಡಿ ರೈತನಿಗೆ ಮೋಸ ಮಾಡಲಾಗುತ್ತಿದೆ. ನಾನು ರೈತರ ಪರ ನಿಲ್ಲುತ್ತಿದ್ದು, ಇದುವರೆಗೂ ಸರ್ಕಾರದ ಕಡೆಯಿಂದ ರೈತರ ಒಂದು ಸಭೆಯನ್ನ ನಡೆಸಿಲ್ಲ. ನಾನು ಈ ಬಗ್ಗೆ ಉಸ್ತುವಾರಿ ಸಚಿವರೊಂದಿಗೆ ಮಾತನಾಡಿದ್ದು, ಈಗ ರೈತರ ಪರಿಹಾರ ಹಣ ಹೆಚ್ಚಿಸುವ ಹಾಗೂ ಬೇರೆ ಜಮೀನು ನೀಡುವ ಆಶ್ವಾಸನೆ ನೀಡಿದ್ದಾರೆ ಎಂದರು.

ನಾನು ರೈತರ ಪರ ನಿಂತಿತ್ತು, ಜಮೀನು ಈಗಾಗಲೆ ಸರ್ಕಾರದ ಕೈ ಸೇರಿದೆ. ರೈತರಿಗೆ ಕಾನೂನು ಪ್ರಜ್ಞೆ ಕಡಿಮೆ ಇರುವುದರಿಂದ ಈ ಸಮಸ್ಯೆ ಆಗಿದೆ. ಕಡಿಮೆ ಪರಿಹಾರ ನೀಡಿ ಅವರ ಜೀವನಕ್ಕೆ ಆಧಾರವಾಗಿದ್ದ ನೆಲೆಯನ್ನು ತೆಗೆದುಕೊಂಡಿದ್ದಾರೆ. ಸಚಿವರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಿಲ್ಲ. ಆದರೆ ರೈತರಿಗೆ ಅನ್ಯಾಯವಾದರೆ ರಾಜ್ಯ ಸರ್ಕಾರ, ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕಿಯಾಗಿ ನಾವೇ ಹೊಣೆ ತೆಗೆದುಕೊಳ್ಳಬೇಕಾಗುತ್ತದೆ. ರೈತರು ಯಾವುದೇ ಕಠಿಣ ಕ್ರಮಕ್ಕೆ ಮುಂದಾದರೆ ಅದಕ್ಕೆ ಸರ್ಕಾರವೇ ಹೊಣೆ. ಜಿಲ್ಲೆಯ ಅಭಿವೃದ್ಧಿಯೊಂದಿಗೆ ನನಗೆ ರೈತರ ಕ್ಷೇಮವೂ ಮುಖ್ಯ ಎಂದು ಸ್ಪಷ್ಟಪಡಿಸಿದರು. ಇದನ್ನು ಓದಿ: ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಸತೀಶ್ ಜಾರಕಿಹೊಳಿ ಕಿಡಿ

Comments

Leave a Reply

Your email address will not be published. Required fields are marked *