ಹಬ್ಬದ ದಿನವೂ ಡಿಕೆಶಿಗೆ ಸಮನ್ಸ್ ಕೊಟ್ಟು ಕರೆಸಿದ ಲೇಡಿ ಆಫೀಸರ್

ಬೆಂಗಳೂರು: ಜಾರಿ ನಿರ್ದೇಶನಾಲಯ(ಇಡಿ) ವಿಚಾರಣೆ ಎದುರಿಸುತ್ತಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರು ಹಬ್ಬದ ಪ್ರಯುಕ್ತ ಇಂದು ಒಂದು ದಿನ ವಿನಾಯಿತಿ ನೀಡಿ ಎಂದು ಕೇಳಿಕೊಂಡರು ಮಹಿಳಾ ಅಧಿಕಾರಿಯೊಬ್ಬರೂ ಅವಕಾಶ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಡಿಕೆ ಅವರು ಇಂದು ವಿಚಾರಣೆ ಎದುರಿಸಲೇ ಬೇಕಾದ ಅನಿವಾರ್ಯ ಉಂಟಾಗಿದೆ.

ದೊಡ್ಡ ಆಲಹಳ್ಳಿ ಕೆಂಪೇಗೌಡರ ಮಗ ಶಿವಕುಮಾರ್ ಅವರದ್ದು ರಾಜ್ಯ ರಾಜಕಾರಣದ ಮಟ್ಟಿಗೆ ಪವರ್ ಫುಲ್ ಎನಿಸುವ ವ್ಯಕ್ತಿತ್ವ. ಮುಖದಲ್ಲಿ ಕಾಣೋ ಗಡುಸುತನ, ಖಡಕ್ ಧ್ವನಿ, ಸಂಕಷ್ಟ ಕಾಲದಲ್ಲಿ ಎದೆಗುಂದದೇ ಮುನ್ನುಗ್ಗುವ ಛಲ ಅವರಲ್ಲಿದೆ. ಈ ಎಲ್ಲವೂ ಡಿಕೆಶಿಯನ್ನು ರಾಜ್ಯ ಕಾಂಗ್ರೆಸ್ ಪಾಲಿಗೆ ಟ್ರಬಲ್ ಶೂಟರ್ ಆಗಿಸಿದ್ದವು. ಕೇವಲ ರಾಜ್ಯ ಕಾಂಗ್ರೆಸ್‍ಗೆ ಮಾತ್ರವಲ್ಲ, ಕಾಂಗ್ರೆಸ್ ಹೈಕಮಾಂಡ್ ಪಾಲಿಗೂ ಕೆಲವೊಮ್ಮೆ ಟ್ರಬಲ್ ಶೂಟರ್ ಆಗಿದ್ದರು.

2017ರಲ್ಲಿ ಗುಜರಾತ್ ರಾಜ್ಯಸಭೆ ಚುನಾವಣೆಯ ವೇಳೆ ಕಾಂಗ್ರೆಸ್ ಶಾಸಕರನ್ನು ಈಗಲ್ಟನ್ ರೆಸಾರ್ಟಿನಲ್ಲಿ ಇರಿಸಿ ಖುದ್ದು ಕಾವಲಿಗೆ ನಿಂತಿದ್ದರು. ಇದುವೇ ಡಿಕೆಶಿಗೆ ಈಗ ಮುಳುವಾಗುತ್ತಿದೆ. ದೆಹಲಿ ಫ್ಲ್ಯಾಟ್‍ನಲ್ಲಿ ಪತ್ತೆಯಾದ 8.58 ಕೋಟಿ ಹಣದ ಜಾಡು ಹಿಡಿಯಲು ಇಡಿ ಶ್ರಮಿಸುತ್ತಿದ್ದು, ಇದೇ ಪ್ರಕರಣದಲ್ಲಿ ಇದೀಗ ಡಿಕೆಶಿ ವಿಚಾರಣೆ ಎದುರಿಸುತ್ತಿದ್ದಾರೆ. ಸತತ ವಿಚಾರಣೆ ಮೂಲಕ ಕಾಂಗ್ರೆಸ್‍ನ ಪವರ್‍ಫುಲ್ ನಾಯಕ ಡಿಕೆಶಿಯನ್ನು ರಾಜಕೀಯವಾಗಿ ಮೆತ್ತಗೆ ಮಾಡಲು ಪ್ರಯತ್ನ ನಡೆಯುತ್ತಿದೆ. ಡಿಕೆಶಿ ಇ.ಡಿ ವಿಚಾರಣೆ ಎದುರಿಸಿ ಹೈರಾಣಾಗಿ ಹೋಗಿದ್ದಾರೆ. ನಿರಂತರ ಪ್ರಶ್ನೆಗಳ ಸುರಿಮಳೆಯಿಂದ ಕನಕಪುರ ಬಂಡೆ ಟೆನ್ಶನ್ ಆಗಿದ್ದಾರೆ. ಅಷ್ಟಕ್ಕೂ ಬಂಡೆಗೆ ಬೆವರಿಳಿಸುವಂತೆ ಮಾಡಿದ್ದು ಒಬ್ಬ ಮಹಿಳಾ ಅಧಿಕಾರಿ. ಆಕೆ ಬೇರೆ ಯಾರೂ ಅಲ್ಲ ದೆಹಲಿ ಇಡಿ ವಿಭಾಗದ ಜಂಟಿ ನಿರ್ದೇಶಕಿ ಮೋನಿಕಾ ಶರ್ಮಾ.

ನಿನ್ನೆ ರಾತ್ರಿ 2 ದಿನದ ವಿಚಾರಣೆ ಮುಗಿದ ಬಳಿಕ ಡಿಕೆ ಶಿವಕುಮಾರ್ ಆ ಮಹಿಳಾ ಅಧಿಕಾರಿಯ ಮುಂದೆ ಹೋಗಿ ನಾನು ನಮ್ಮ ಊರಿಗೆ ಹೋಗಬೇಕು. ಬೆಂಗಳೂರಿನಲ್ಲಿ ಹಬ್ಬ ಇದೆ. ನನ್ನ ತಂದೆಯವರ ಕಾರ್ಯ ಇದೆ. ಸೋಮವಾರ ಒಂದು ದಿನ ವಿಚಾರಣೆಯಿಂದ ವಿನಾಯಿತಿ ಕೊಡಿ ಅಂತ ಕೇಳಿಕೊಂಡಿದ್ದಾರೆ. ಡಿಕೆಶಿಯ ಅಷ್ಟೆಲ್ಲಾ ಮಾತುಗಳಿಗೂ ಮೋನಿಕಾ ಅವರು ತೋ ಮೇ ಕ್ಯಾ ಕರೋ..!? ಎಂದು ಹಿಂದಿಯಲ್ಲಿ ಒಂದೇ ಮಾತು ಆಡಿದ್ದಾರೆ. ಹೀಗಾಗಿ ಡಿಕೆಶಿಯವರು ಇಂದು ದೆಹಲಿಯಲ್ಲೇ ಹಬ್ಬ ಆಚರಣೆ ಮಾಡುತ್ತಾರೆ ಎಂದು ತಿಳಿದುಬಂದಿದೆ.

Comments

Leave a Reply

Your email address will not be published. Required fields are marked *