ಸೌದಿ ಅರೇಬಿಯಾದಲ್ಲೂ ಪೌರತ್ವ ಕಿಚ್ಚು- ಕುಂದಾಪುರದ ಯುವಕ ಅರೆಸ್ಟ್?

ಉಡುಪಿ: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಸೌದಿ ದೊರೆ ಬಗ್ಗೆ ಅವಹೇಳನ ಮಾಡಿರುವ ಆರೋಪದಲ್ಲಿ ಕುಂದಾಪುರದ ಯುವಕ ಅರೆಸ್ಟ್ ಆಗಿದ್ದಾನೆ.

ಸೌದಿಯ ದಮಾಮ್ ನ ಕಂಪನಿಯಲ್ಲಿ ಕುಂದಾಪುರ ಮೂಲದ ಹರೀಶ್ ಬಂಗೇರ ಕೆಲಸ ಮಾಡುತ್ತಿದ್ದಾನೆ. ಈತ ತನ್ನ ಫೇಸ್ ಬುಕ್ ಅಕೌಂಟ್ ನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ) ಮತ್ತು ಪೌರತ್ವ (ತಿದ್ದುಪಡಿ) ಕಾಯ್ದೆಯ (ಸಿಎಎ) ಕಾಯ್ದೆಯ ಪರ ಬರೆದು ಪೋಸ್ಟ್ ಮಾಡಿದ್ದರು. ಈ ಬರಹದ ಬಗ್ಗೆ ವಿರೋಧ ವ್ಯಕ್ತವಾಗಿತ್ತು. ಕೂಡಲೇ ಹರೀಶ್, ಪೋಸ್ಟ್ ಡಿಲೀಟ್ ಮಾಡಿ ಕ್ಷಮೆ ಕೇಳಿದ ವೀಡಿಯೋ ಅಪ್ಲೋಡ್ ಮಾಡಿದ್ದನು.

ಇದಾದ ಕೂಡಲೇ ಹರೀಶ್ ಬಂಗೇರ ಎಂಬ ಮತ್ತೊಂದು ಅಕೌಂಟಲ್ಲಿ ಸೌದಿ ದೊರೆಗೆ ಅವಹೇಳನ ಮಾಡಿದ ಫೋಟೋ, ಬರಹ ಅಪ್ಲೋಡಾಗಿದೆ. ಮತ್ತೊಂದು ಪೋಸ್ಟಲ್ಲಿ ಮೆಕ್ಕಾದಲ್ಲಿ ರಾಮಮಂದಿರ ನಿರ್ಮಾಣ ಆಗಬೇಕು ಎಂದು ಬರೆದುಕೊಂಡಿದ್ದ ಪೋಸ್ಟ್ ಕೂಡ ಅಪ್ಲೋಡಾಗಿದೆ. ಈ ಪೋಸ್ಟ್ ಸೌದಿಯಲ್ಲಿ ಶೇರ್ ಆಗಿದೆ. ಹರೀಶ್ ನನ್ನು ಸೌದಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಕುಂದಾಪುರದ ಮನೆಯವರ ಸಂಪರ್ಕಕ್ಕೆ ಹರೀಶ್ ಸಿಗುತ್ತಿಲ್ಲವಂತೆ. ನಕಲಿ ಖಾತೆಯ ಮೂಲಕ ಪೋಸ್ಟ್ ಶೇರ್ ಆಗಿರುವ ಶಂಕೆಯಿದೆ ಎಂದು ಹರೀಶ್ ಗೆಳೆಯರು ಹೇಳುತ್ತಿದ್ದಾರೆ. ಈ ಬಗ್ಗೆ ಉಡುಪಿ ಎಸ್ ಪಿಗೆ ದೂರು ನೀಡುವ ಸಾಧ್ಯತೆಯಿದ್ದು, ಕುಟುಂಬಸ್ಥರು ಸಂಪರ್ಕಕ್ಕೆ ಸಿಕ್ಕಮೇಲೆ ಪೂರ್ಣ ಚಿತ್ರಣ ಸಿಗಲಿದೆ.

Comments

Leave a Reply

Your email address will not be published. Required fields are marked *