ಬೆಂಗ್ಳೂರಲ್ಲಿ ಕುಂದಾಪುರದ ರಿಯಲ್ ಎಸ್ಟೇಟ್ ಏಜೆಂಟ್ ನ ಕತ್ತು ಕತ್ತರಿಸಿ ಬರ್ಬರ ಹತ್ಯೆ

ಬೆಂಗಳೂರು: ನಗರದಲ್ಲಿ ಕುಂದಾಪುರ ಮೂಲದ ಗೋಲ್ಡನ್ ಸುರೇಶ್ ಎಂಬ ರಿಯಲ್ ಎಸ್ಟೇಟ್ ಏಜೆಂಟ್‍ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಜಯನಗರದ ಜೆಎಸ್‍ಎಸ್ ಸರ್ಕಲ್‍ನಲ್ಲಿರುವ ಅಪಾರ್ಟ್‍ಮೆಂಟ್‍ವೊಂದರಲ್ಲಿ ಕೋಟೇಶ್ವರ ಮೂಲದ 38 ವರ್ಷದ ಸುರೇಶ್ ಪೂಜಾರಿಯನ್ನು ಹತ್ಯೆ ಮಾಡಲಾಗಿದೆ.

ಮೊನ್ನೆ ರಾತ್ರಿ ಅಪಾರ್ಟ್‍ಮೆಂಟ್‍ನಲ್ಲಿ ಪಾರ್ಟಿ ಮಾಡಿದ ನಂತರ ಸುರೇಶ್ ಕತ್ತು ಕತ್ತರಿಸಿ ಕೊಲೆಗೈದು ಗೋಣಿಚೀಲದಲ್ಲಿಟ್ಟು ಪರಾರಿಯಾಗಿದ್ದಾರೆ. ರಾತ್ರಿ ಪಾರ್ಟಿ ಮಾಡಿದ್ದ ಸ್ನೇಹಿತರೇ ಕೃತ್ಯ ಎಸಗಿರುವ ಶಂಕೆ ಎದುರಾಗಿದೆ.

ಸ್ನೇಹಿತ ರಾಕೇಶ್ ಹಾಗೂ ಸುರೇಶ್ ನಡುವೆ ಹಣಕಾಸು ವಿಚಾರವಾಗಿ ತಗಾದೆ ಉಂಟಾಗಿತ್ತು. ಕಳೆದ ಒಂದು ವರ್ಷದಿಂದ ಸುರೇಶ್ ಇಲ್ಲಿಯೇ ವಾಸವಾಗಿದ್ದರು. ಸುರೇಶ್ ಅಪರಾಧ ಹಿನ್ನೆಲೆ ಹೊಂದಿದ್ದು ಉಡುಪಿ, ಕುಂದಾಪುರ ಸೇರಿ ವಿವಿಧೆಡೆಗಳಲ್ಲಿ 18 ಕೇಸ್‍ಗಳು ದಾಖಲಾಗಿದ್ದವು.

2008ರಲ್ಲಿ ಕುಂದಾಪುರ ಪೊಲೀಸ್ ಠಾಣೆಗೆ ನುಗ್ಗಿ ಠಾಣಾಧಿಕಾರಿ ಸತೀಶ್ ಮತ್ತು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ ಆರೋಪ ಕೂಡ ಸುರೇಶ್ ವಿರುದ್ಧ ಕೇಳಿಬಂದಿತ್ತು.

Comments

Leave a Reply

Your email address will not be published. Required fields are marked *