ಮೋದಿ ಸುಮಲತಾಗೆ ಬೆಂಬಲ ನೀಡಿದ್ಮೇಲೆ ಸಿಎಂ ಟೇಪ್ ರೆಕಾರ್ಡ್ ಚೇಂಜ್ ಆಗಿದೆ: ಜೋಶಿ ಟಾಂಗ್

ಧಾರವಾಡ: ಕಾಂಗ್ರೆಸ್-ಜೆಡಿಎಸ್‍ನವರು ಹತಾಶೆಗೊಂಡು ಮಾತನಾಡುತ್ತಿದ್ದಾರೆ, ಪ್ರಧಾನಿ ನರೇಂದ್ರ ಮೋದಿ ಅವರು ಸುಮಲತಾ ಅಂಬರೀಶ್‍ಗೆ ಬೆಂಬಲ ನೀಡಿದ ಮೇಲೆ ಸಿಎಂ ಕುಮಾರಸ್ವಾಮಿ ಟೇಪ್ ರೆಕಾರ್ಡ್ ಚೇಂಜ್ ಆಗಿದೆ ಎಂದು ಸಂಸದ ಪ್ರಹ್ಲಾದ್ ಜೋಶಿ ಟಾಂಗ್ ನೀಡಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್‍ನವರು ಹತಾಶೆಗೊಂಡು ಮಾತನಾಡುತ್ತಿದ್ದಾರೆ. ದೇಶದ ಪ್ರಧಾನಿ ಎನ್ನುವುದನ್ನು ಮರೆತು ಮೋದಿ ಅವರನ್ನು ಏಕವಚನದಲ್ಲಿ ಬೈಯ್ಯುವ ಕೀಳುಮಟ್ಟಕ್ಕೆ ಮೈತ್ರಿ ಪಕ್ಷದವರು ಇಳಿದಿದ್ದಾರೆ. ಮಹದಾಯಿ ವಿಳಂಬ ವಿಚಾರವಾಗಿ ಮಾತನಾಡಿ, ಮೇಲ್ಮನವಿ ಸಲ್ಲಿಸಿದಾಗ ಗೆಜೆಟ್ ನೋಟಿಫಿಕೇಷನ್ ಮಾಡೋಕೆ ಬರೊಲ್ಲ ಅಂತ ಅವರೇ ಹೇಳಿದ್ದಾರೆ. ಆದರೆ ಈಗ ಮೋದಿ ಅವರು ಸುಮಲತಾಗೆ ಬೆಂಬಲ ನೀಡುತ್ತೇನೆ ಎಂದು ಹೇಳಿದ ಮೇಲೆ ಕುಮಾರಸ್ವಾಮಿ ಟೇಪ್ ರೆಕಾರ್ಡ್ ಚೇಂಜ್ ಆಗಿದೆ. ಜನಕ್ಕೆ ಸುಳ್ಳು ಹೇಳುವ ಟೋಪಿ ಹಾಕುವ ಕೆಲಸವನ್ನು ಅವರು ಬಹಳ ದಿನದಿಂದ ಮಾಡಿದ್ದಾರೆ ಎಂದು ಜೋಶಿ ಟೀಕಿಸಿದರು.

ಕುಮಾರಸ್ವಾಮಿ ಹುಬ್ಬಳ್ಳಿಗೆ ಬಂದು ನನಗೆ ಎರಡು ಪ್ರಶ್ನೆ ಕೇಳಿದ್ದಾರೆ. ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗ ಏನಾಯ್ತು ಅಂತ ಅವರು ಕೇಳಿದ್ದಾರೆ. ಸಿಎಂ ಸ್ಥಾನದಲ್ಲಿದ್ದುಕೊಂಡು ವಿಷಯ ತಿಳಿಯದ ನೀವೊಬ್ಬ ಅಜ್ಞಾನಿ. ಇಲ್ಲವೇ ಗೊತ್ತಿದ್ದು ಸುಳ್ಳು ಹೇಳುತ್ತಾ ಇದ್ದೀರಾ ಅನಿಸುತ್ತಿದೆ ಎಂದು ಕಿಡಿಕಾರಿದರು.

ಹುಬ್ಬಳ್ಳಿ-ಅಂಕೋಲಾ ಬಗ್ಗೆ ಜನರನ್ನು ನ್ಯಾಯಾಲಯಕ್ಕೆ ಕಳುಹಿಸಿದವರೇ ಇವರು. ನೈಋತ್ಯ ರೈಲ್ವೆ ವಲಯಕ್ಕೆ ಅಡ್ಡಗಾಲು ಹಾಕಿದ್ದು ಕೂಡ ಇವರೇ. ಆದ್ರೆ ನಾವು ಸುಪ್ರೀಂ ಕೋರ್ಟಗೆ ಹೋಗಿ ನೈಋತ್ಯ ರೈಲ್ವೆ ವಲಯ ಮಾಡಿಸಿದ್ದೇವೆ. ಉತ್ತರ ಕರ್ನಾಟಕ ವಿರೋಧಿ ನಿಲುವು ನಿರಂತರವಾಗಿ ಅನುಸರಿಸಿಕೊಂಡು ಬಂದವರು ಈಗ ಉತ್ತರ ಕರ್ನಾಟಕದ ಮೇಲೆ ಪ್ರೀತಿ-ಪ್ರೇಮ ಹರಿದು ಬಂದಂತೆ ಮಾತಾಡ್ತಾ ಇದ್ದಾರೆ ಎಂದು ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *