ಗಣೇಶ ಹಬ್ಬಕ್ಕೆ ಊರಿಗೆ ಹೋಗ್ತಿದೀರಾ? KSRTC ಯಿಂದ 1,200 ಹೆಚ್ಚುವರಿ ಬಸ್

ಬೆಂಗಳೂರು: ಗೌರಿ ಗಣೇಶ ಹಬ್ಬದ ಪ್ರಯುಕ್ತ ಕೆಎಸ್‌ಆರ್‌ಟಿಸಿ ಬೆಂಗಳೂರಿನಿಂದ ಹೊರಡುವ ಪ್ರಯಾಣಿಕರಿಗೆ ಅನುಕೂಲವಾಗುಂತೆ 1,200 ಬಸ್‍ಗಳ ಹೆಚ್ಚುವರಿ ಸೇವೆ ನೀಡಲು ಮುಂದಾಗಿದೆ.

ಪ್ರಮುಖವಾಗಿ ನಗರದಿಂದ ದೂರದ ಊರುಗಳಿಗೆ ಸಂಚರಿಸುವವರಿಗೆ ಹೆಚ್ಚುವರಿ ಬಸ್‍ಗಳ ಸೇವೆಯನ್ನು ಸೆ.11 ಹಾಗೂ 12 ರಂದು ನೀಡುತ್ತಿದೆ. ರಾಜ್ಯ ಸೇರಿದಂತೆ ಹೊರರಾಜ್ಯಗಳಿಗೂ ವಿಶೇಷ ಸೇವೆ ಲಭ್ಯವಾಗಲಿದೆ. ಪ್ರಮುಖವಾಗಿ ನಗರದ ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಮೈಸೂರು, ಮಡಿಕೇರಿ, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ ಮಾರ್ಗಗಳಿಗೆ ಬಸ್ ಸೇವೆ ಕಲ್ಪಿಸಲಾಗಿದೆ.

ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಹೊರ ರಾಜ್ಯಗಳ ಕಡೆ ಅಂದರೆ ಮಧುರೈ, ಚೆನ್ನೈ, ತಿರುಪತಿ, ವಿಜಯವಾಡ, ಹೈದರಾಬಾದ್, ಕೊಯಮತ್ತೂರ್ ಸೇರಿದಂತೆ ಹಲವು ನಗರಗಳಿಗೆ ಶಾಂತಿನಗರ ಡಿಪೊ 2 ಮತ್ತು 3ರ ಬಸ್ ನಿಲ್ದಾಣದಿಂದ ಐಶಾರಾಮಿ ಬಸ್ ಸೇವೆಯನ್ನು ಏರ್ಪಡಿಸಲಾಗಿದೆ.

ಬೇಡಿಕೆಗೆ ಅನುಗುಣವಾಗಿ ನಗರ ಪ್ರಮುಖ ಸ್ಥಳಗಳಾದ ವಿಜಯನಗರ, ಬನಶಂಕರಿ, ಜಾಲಹಳ್ಳಿ ಕ್ರಾಸ್, ಬಸವೇಶ್ವರ ನಿಲ್ದಾಣ, ಜಯನಗರ 4ನೇ ಬ್ಲಾಕ್, ಕೆಂಗೇರಿ ಉಪನಗರ ಬಸ್ ನಿಲ್ದಾಣಗಳಿಂದ ಬಸ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ರಾಜ್ಯದ ಶಿವಮೊಗ್ಗ, ದಾವಣಗೆರೆ, ಮಂಗಳೂರು, ಕುಂದಾಪುರ, ಶೃಂಗೇರಿ, ಕುಕ್ಕೆ ಸುಬ್ರಮಣ್ಯ, ಧರ್ಮಸ್ಥಳ ಸೇರಿದಂತೆ ಇತರೆ ಪ್ರಮುಖ ಸ್ಥಳಗಳಿಗೂ ಬಸ್ ಸೇವೆ ಲಭ್ಯವಿದೆ. ಬಸ್ ಟಿಕೆಟ್ ಮುಂಗಡ ಬುಕ್ ಮಾಡಲು ಕೂಡ ಅವಕಾಶ ನೀಡಲಾಗಿದ್ದು, ಕೆಎಸ್‌ಆರ್‌ಟಿಸಿ ಸಂಸ್ಥೆಯ ವೆಬ್ ಸೈಟ್ www.ksrtc.in. ಗೆ ಭೇಟಿ ನೀಡಿ ಮುಂಗಡವಾಗಿ ಟಿಕೆಟ್ ಬುಕ್ ಮಾಡಬಹುದು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *