KSRTC ಚಾಲಕ ಸಾವು ಪ್ರಕರಣ- ಪೂರ್ವನಿಯೋಜಿತ ಕೃತ್ಯ, ಬಸ್‍ನಲ್ಲೇ ಇದ್ದ ಓರ್ವ ಆರೋಪಿ

– ಬಸ್‍ನಲ್ಲಿದ್ದು ಉಳಿದ ಆರೋಪಿಗಳು ಕಲ್ಲೆಸೆಯಲು ನಿರ್ದೇಶನ

ಬಾಗಲಕೋಟೆ: ಜಮಖಂಡಿಯ ಕೆಎಸ್‍ಆರ್ ಟಿಸಿ ಬಸ್ ಚಾಲಕ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಭಯಾನಕ ಮಾಹಿತಿ ಹೊರ ಬಿದ್ದಿದ್ದು, ಈ ಸಾವು ಆಕಸ್ಮಿಕವಲ್ಲ, ಬದಲಿಗೆ ಪಕ್ಕಾ ಪ್ಲಾನ್ ಮಾಡಿದ ಕೃತ್ಯ. ಅಲ್ಲದೆ ಆರೋಪಿಗಳ ಪೈಕಿ ಒಬ್ಬ ಬಸ್‍ನಲ್ಲಿಯೇ ಇದ್ದ ಎಂಬ ಆಘಾತಕಾರಿ ಮಾಹಿತಿ ತನಿಖೆ ವೇಳೆ ಬಹಿರಂಗವಾಗಿದೆ.

ಎಸ್ಪಿ ಲೋಕೇಶ್ ಜಗಲಾಸರ್ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದು, ನಬಿರಸೂಲಸಾಬ್ ಚಲಿಸುತ್ತಿದ್ದ ಬಸ್ ಗೆ ಕಲ್ಲು ತೂರಲು ಪಕ್ಕಾ ಪ್ಲಾನ್ ನಡೆಸಲಾಗಿತ್ತು. ಓರ್ವ ಆರೋಪಿ ಬಸ್ ನಲ್ಲೇ ಇದ್ದ, ನಬಿರಸೂಲಸಾಬ್ ಅವರು ಚಲಿಸುತ್ತಿದ್ದ ಬಸ್ ಗೆ ಅಚಾನಕ್ ಆಗಿ ಕಲ್ಲು ತೂರಿದ್ದಲ್ಲ. ಇದು ಪೂರ್ವನಿಯೋಜಿತ ಕೃತ್ಯವಾಗಿತ್ತು. ಮೊದಲೇ ಪ್ಲಾನ್ ಮಾಡಲಾಗಿತ್ತು ಎಂದು ತನಿಖೆ ವೇಳೆ ಬಯಲಾಗಿದೆ. ಬಸ್ ಸಂಚಾರ ತಡೆಯಬೇಕೆಂಬ ಉದ್ದೇಶದಿಂದ ಕೆಎಸ್‍ಆರ್ ಟಿಸಿಯ ಐವರು ಸಿಬ್ಬಂದಿ ಪಕ್ಕಾ ಪ್ಲಾನ್ ಮಾಡಿ ಈ ಕೃತ್ಯ ಎಸಗಿದ್ದಾರೆ ಎಂದು ತಿಳಿಸಿದರು.

ಕೃತ್ಯ ಎಸಗಲು ಅರುಣ್ ಅರಕೇರಿ ಈ ಮಾಸ್ಟರ್ ಪ್ಲಾನ್ ಮಾಡಿದ್ದ, ವಿಜಯಪುರ ನಗರದಿಂದ ಅದೇ ಬಸ್ ನಲ್ಲೇ ಪ್ರಯಾಣಿಸುತ್ತಿದ್ದ ಅರಕೇರಿ, ಬಸ್ ನಲ್ಲೇ ಕೂತು ಕಲ್ಲು ತೂರೋದಕ್ಕೆ ಸ್ಕೆಚ್ ರೂಪಿಸಿದ್ದ. ಬಸ್ ನ ರೂಟ್, ಚಲಿಸುತ್ತಿದ್ದ ಸ್ಥಳದ ಬಗ್ಗೆ ಮಾಹಿತಿ ನೀಡುತ್ತಿದ್ದ. ಬಸ್ ಇಂತಹ ಸ್ಥಳಕ್ಕೆ ರೀಚ್ ಆಗಿದೆ ಎಂದು ಇನ್ನುಳಿದ ನಾಲ್ವರಿಗೆ ಡೈರೆಕ್ಷನ್ ನೀಡುತ್ತಿದ್ದ. ಅರುಣ್ ಅರಕೇರಿ ಡೈರೆಕ್ಷನ್ ಪ್ರಕಾರ ಮಲ್ಲಪ್ಪ ತಳವಾರ, ಚೇತನ್ ಕರ್ವೆ, ಸದಾಶಿವ ಕಂಕಣವಾಡಿ, ರೋಹಿತ್ ದಾಸರ ಅಲರ್ಟ್ ಆಗಿ ಬಸ್ ಕವಟಗಿ ಪುನರ್ವಸತಿ ಕೇಂದ್ರದ ಬಳಿ ಬರುತ್ತಿದ್ದಂತೆ ಅಡ್ಡಬಂದು ಬಸ್‍ಗೆ ಕಲ್ಲೆಸೆದಿದ್ದಾರೆ. ಬಳಿಕ ನಾಲ್ವರೂ ಎಸ್ಕೇಪ್ ಆಗಿದ್ದದ್ದರು.

ವರ್ಗಾವಣೆಯಿಂದ ಕ್ರೋಧಗೊಂಡು ಕೃತ್ಯ
ಕೆಎಸ್‍ಆರ್‍ಟಿಸಿ ಸಿಬ್ಬಂದಿ ವರ್ಗಾವಣೆ ಮಾಡಿದ್ದೇ ಕ್ರೋಧಕ್ಕೆ ಕಾರಣವಾಗಿದ್ದು, ಬಸ್ ಸಂಚರಿಸುವುದನ್ನು ತಡೆಯೋದಕ್ಕೆ ಪಣ ತೊಟ್ಟಿದ್ದರು. ಅಥಣಿಯಲ್ಲಿನ ಬಸ್ ಗೆ ಕಲ್ಲೆಸೆತದಲ್ಲೂ ಇವರ ಶಾಮೀಲು ಇದೆ. ಕರ್ತವ್ಯಕ್ಕೆ ಹಾಜರಾಗದ ಸಿಬ್ಬಂದಿ ಪರ ಜಿಲ್ಲೆಗಳಿಗೆ ವರ್ಗಾವಣೆ ಮಾಡಿದ್ದರಿಂದ ಆಕ್ರೋಶಗೊಂಡಿದ್ದರು. ಅರುಣ್ ಅರಕೇರಿಯನ್ನು ಕೂಡ ಪರ ಜಿಲ್ಲೆಗೆ ವರ್ಗಾವಣೆ ಮಾಡಲಾಗಿತ್ತು. ಇದರಿಂದ ಆಕ್ರೋಶಗೊಂಡಿದ್ದ ಅರಕೇರಿ, ಬೆಳಗಾವಿ ಜಿಲ್ಲೆ ಅಥಣಿಯಲ್ಲೂ ಕೆಎಸ್‍ಆರ್ ಟಿಸಿ ಬಸ್ ಗೆ ಇತ್ತೀಚೆಗೆ ಕಲ್ಲು ತೂರಿದ್ದ ಎನ್ನಲಾಗಿದ್ದು, ಇತ್ತೀಚೆಗೆ ಅಥಣಿ ಬಸ್ ಗೆ ಕಲ್ಲು ತೂರಾಟದಲ್ಲೂ ಅರಕೇರಿ ಪಾತ್ರ ಇದೆ. ಈಗ ಐವರಿಂದ ಕೃತ್ಯ ನಡೆದಿದೆ ಎಂದು ಎಸ್‍ಪಿ ವಿವರಿಸಿದ್ದಾರೆ.

Comments

Leave a Reply

Your email address will not be published. Required fields are marked *