ಮೈತ್ರಿ ಸರ್ಕಾರಕ್ಕೆ ಛೀ, ಥೂ ಅನ್ನೋ ಸ್ಥಿತಿ ಬಂದಿದೆ: ಈಶ್ವರಪ್ಪ

ಹುಬ್ಬಳ್ಳಿ: ರಾಜ್ಯದಲ್ಲಿ ರಾಜಕೀಯ ಆಸ್ಥಿರತೆ ತಾಂಡವವಾಡುತ್ತಿದ್ದು, ಮೈತ್ರಿ ಸರ್ಕಾರಕ್ಕೆ ಇಡೀ ರಾಜ್ಯದ ಜನ ಛೀ, ಥೂ ಎನ್ನುವ ಪರಿಸ್ಥಿತಿ ಎದುರಾಗಿದೆ. ಐಎಂಎ ಪ್ರಕರಣ ಹಾಗೂ ಜಿಂದಾಲ್ ಡೀಲ್ ರಾಜ್ಯ ಜನರಿಗೆ ಶಾಕ್ ನೀಡಿದೆ ಎಂದು ಬಿಜೆಪಿ ಶಾಸಕ ಕೆಎಸ್ ಈಶ್ವರಪ್ಪ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸರ್ಕಾರ ಇಲ್ಲವೆ ಎನ್ನುವ ಸ್ಥಿತಿ ನಿರ್ಮಾಣವಾಗಿದ್ದು, ಐಎಂಎ ಪ್ರಕರಣದಲ್ಲಿ ಮಂತ್ರಿ ಜಮೀರ್ ಅಹ್ಮದ್ ಹೆಸರು ಕೇಳಿ ಬಂದಿದೆ. ರಾಜ್ಯ ಸರ್ಕಾರಕ್ಕೆ ಪ್ರಕರಣದ ಬಗ್ಗೆ ಮುನ್ನವೇ ಮಾಹಿತಿ ಇದ್ದರು ಕ್ರಮ ಕೈಗೊಂಡಿಲ್ಲ. ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಜೀವಂತವಾಗಿ ಉಳಿಯಲು ಸಾಧ್ಯವೇ ಇಲ್ಲಾ, ಏಕೆಂದರೆ ಅವರು ಜೀವಂತವಾಗಿ ಇರಲು ಪ್ರಭಾವಿ ನಾಯಕರು ಬಿಡಲ್ಲ. ಐಎಎಂ ವಂಚನೆ ಪ್ರಕರಣದಲ್ಲಿ ಮೈತ್ರಿ ಸರ್ಕಾರದ ಬಹುತೇಕ ಸಚಿವರು ಇದ್ದಾರೆ. ಹಾಗಾಗಿ ಈ ಪ್ರಕರಣ ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.

ಇಷ್ಟು ದಿನ ಮುಸ್ಲಿಂ ಭಾಂದವರ ನಾಯಕರಂತೆ ನೋಡಿಕೊಂಡು ಬಂದಿದ್ದ ಮುಖಂಡರೆ ಪ್ರಕರಣದಲ್ಲಿ ಹಣ ದೋಚಿದ್ದಾರೆ. ಅವರ ಹಣ ವಾಪಸ್ಸು ಬರಬೇಕು, ಇದಕ್ಕೆ ಮನ್ಸೂರ್‍ನನ್ನು ರಕ್ಷಣೆ ಮಾಡಬೇಕು. ಆದರೆ ಸರ್ಕಾರ ಈ ಪ್ರಕರಣ ಮುಚ್ಚಿಹಾಕಲು ಮುಂದಾಗಿದೆ ಎಂದು ಆರೋಪಿಸಿದರು.

ಜಿಂದಾಲ್ ಡೀಲ್‍ನಿಂದ ಸರ್ಕಾರಕ್ಕೆ ಎಷ್ಟು ಕಿಕ್ ಬ್ಯಾಕ್ ಲಭಿಸಿದೆ ಎಂಬುವುದು ನನಗೆ ತಿಳಿದಿಲ್ಲ. ಆದರೆ ಸರ್ಕಾರ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಲು ಸಿದ್ಧರಾಗಿದ್ದು, ಪರಿಣಾಮ ಸರ್ಕಾರದ ಬುಡ ಅಲುಗಾಡುತ್ತಿದೆ. ಆದರೆ ಕಾಂಗ್ರೆಸ್ ನಾಯಕರು ಆಪರೇಷನ್ ಕಮಲ ಎಂದು ಹೇಳಿ ಜನರ ಗಮನ ಬೇರಡೆ ಸೆಳೆಯುತ್ತಿದ್ದಾರೆ. ಈಗಾಲೇ ರಾಜೀನಾಮೆ ಪರ್ವ ಆರಂಭವಾಗಿದ್ದು, ಮೈತ್ರಿ ಸರ್ಕಾರ ಪ್ರಭಾವಿ ಸಚಿವರೇ ಕಾಂಗ್ರೆಸ್ ಶಾಸಕರ ರಾಜೀನಾಮೆ ಹಿಂದೆ ಮೋದಿ, ಅಮಿತ್ ಶಾ ಅವರು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ಗೌರವ ಉಳಿಸಿಕೊಳ್ಳಲು ಸಿಎಂ ರಾಜೀನಾಮೆ ನೀಡಿ ಹೋಗಬೇಕು. ಇಲ್ಲವಾದರೆ ಅವಮಾನ ಎದುರಿಸಿ ಸರ್ಕಾರ ಕಳೆದುಕೊಳ್ಳಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

Comments

Leave a Reply

Your email address will not be published. Required fields are marked *