ಪ್ರವಾಸಿಗರಿಗೆ ಎರಡು ದಿನ ಕೆಆರ್ ಎಸ್, ಬೃಂದಾವನ ಪ್ರವೇಶ ನಿಷೇಧ

ಮಂಡ್ಯ: ಮಂಗಳವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಪ್ರಾಣ ಹಾನಿಯಾಗಿದ್ದ ಪರಿಣಾಮ ಎರಡು ದಿನಗಳ ಕಾಲ ಪ್ರವಾಸಿಗರಿಗೆ ಕೆಆರ್‍ಎಸ್, ಬೃಂದಾವನ ಪ್ರವೇಶ ನಿಷೇಧಿಸಲಾಗಿದೆ.

ಮಂಗಳವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಶ್ರೀರಂಗಪಟ್ಟಣ ತಾಲೂಕಿನ ವಿಶ್ವವಿಖ್ಯಾತ ಕೆಆರ್ ಎಸ್‍ನ ಬೃಂದಾವನದ ಎರಡು ಮರಗಳು ಉರುಳಿಬಿದ್ದಿವೆ. 30 ಕ್ಕೂ ಹೆಚ್ಚು ಮರದ ರೆಂಬೆಕೊಂಬೆಗಳು ಮುರಿದು ಬಿದ್ದಿರುವುದರಿಂದ ಮರದಲ್ಲಿದ್ದ ನೂರಾರು ಪಕ್ಷಿಗಳು ಧರೆಗುರುಳಿ ನರಳಾಡುತ್ತಿವೆ. ತಮಿಳುನಾಡು ಮೂಲದ ಓರ್ವ, ಕೇರಳ ಮೂಲದ ಇಬ್ಬರು ಸೇರಿ ಮೂವರು ಮೃತಪಟ್ಟು, ಹನ್ನೊಂದು ಪ್ರವಾಸಿಗರು ಗಾಯಗೊಂಡಿದ್ದರು. ಈ ಹಿನ್ನೆಲೆ ಬೃಂದಾವನ ಪ್ರವೇಶ ನಿಷೇಧ ಮಾಡಲಾಗಿದೆ. ಮರಗಳ ತೆರವು ಕಾರ್ಯಾಚರಣೆ ನಡೆಯುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಪ್ರವೇಶ ನಿಷೇಧಿಸಲಾಗಿದೆ ಅಂತ ನಿಗಮದ ಇಇ ಬಸವರಾಜೇಗೌಡ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕೆಆರ್​ಎಸ್ ಬಳಿ ವರುಣನ ಅವಾಂತರ – ಮರ ಬಿದ್ದು ಮೂವರು ಪ್ರವಾಸಿಗರ ಸಾವು

ಕೆಲವು ಪಕ್ಷಿಗಳು ಮರದಿಂದ ಬಿದ್ದು ಗಾಯಗೊಂಡು ನರಳಾಡುತ್ತಿವೆ. ಪಕ್ಷಿಗಳ ಸ್ಥಿತಿ ನೋಡಿ ಸಂಕಟಪಡುತ್ತಿರುವ ಸಾರ್ವಜನಿಕರು ಗಾಯಗೊಂಡಿರುವ ಪಕ್ಷಿಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕೆಂದು ಅಧಿಕಾರಿಗಳನ್ನು ಆಗ್ರಹಿಸುತ್ತಿದ್ದಾರೆ.

ವಿಶ್ವವಿಖ್ಯಾತ ಕೆಆರ್ ಎಸ್ ಬೃಂದಾವನದಲ್ಲಿ ಮೊದಲ ಬಾರಿಗೆ ಈ ರೀತಿಯ ಅವಘಡ ನಡೆದಿದ್ದು, ಮುರಿದು ಬಿದ್ದ ಮರಗಳು, ರೆಂಬೆಕೊಂಬೆಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಹೀಗಾಗಿ ಯಾವುದೇ ರೀತಿಯ ತೊಂದರೆಯಾಗದಂತೆ ಪ್ರವಾಸಿಗರಿಗೆ ಎರಡು ದಿನ ಕೆಆರ್‍ಎಸ್ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.

Comments

Leave a Reply

Your email address will not be published. Required fields are marked *