ಡಿಕೆಶಿಗೆ ಕೆಪಿಸಿಸಿ ಪಟ್ಟದ ಸುದ್ದಿಗೆ ಸಿದ್ದರಾಮಯ್ಯ ಸಿಡಿಮಿಡಿ

ಹುಬ್ಬಳ್ಳಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ಸಿಗುತ್ತೆ ಎನ್ನುವ ಮಾಧ್ಯಮಗಳ ಪ್ರಶ್ನೆಗಳಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸಿಡಿಮಿಡಿಕೊಂಡಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ನಿಮಗ್ಯಾರು ಹೇಳಿದರು? ಊಹಾಪೋಹ ಸೃಷ್ಟಿಸಬೇಡಿ. ಅದೆಲ್ಲಾ ಹೈಕಮಾಂಡ್‍ಗೆ ಬಿಟ್ಟ ವಿಚಾರ. ಸದ್ಯಕ್ಕೆ ಅಧ್ಯಕ್ಷರ ಬದಲಾವಣೆ ವಿಚಾರ ಇಲ್ಲ. ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ. ನೀವೇ ಎಲ್ಲಾ ಊಹಾಪೋಹಗಳನ್ನು ಸೃಷ್ಟಿ ಮಾಡುವುದು ಎಂದು ಮಾಧ್ಯಮಗಳ ವಿರುದ್ಧ ಗುಡುಗಿದರು.

ಪಾದಯಾತ್ರೆ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಈ ಬಗ್ಗೆ ಯೋಚನೆ ನಡೆದಿದೆ. ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ಅವರ ಬಗ್ಗೆ ನಾನು ಏಕವಚನದಲ್ಲಿ ಮಾತನಾಡಿಲ್ಲ. ಕಲಾಪದಲ್ಲಿ ಹೆಚ್ಚು ಕಾಲ ಮಾತನಾಡಲು ಅವಕಾಶ ನೀಡಲಿಲ್ಲ. ಸ್ಪೀಕರ್ ಹಕ್ಕುಚ್ಯುತಿ ಮಂಡನೆ ಮಾಡಲಿ. ಆಮೇಲೆ ನೋಡೋಣ. ನಾನು ಯಾಕೆ ಕ್ಷಮೆ ಕೇಳಬೇಕು. ಸಿಎಂ ಯಡಿಯೂರಪ್ಪ ಹೇಳಿದರೆ ಕ್ಷಮೆ ಕೇಳಿಬಿಡಬೇಕಾ? ಅವರಿಂದ ನಾನು ಪಾಠ ಕಲಿಯಬೇಕಿಲ್ಲ ಎಂದು ವಾಗ್ದಾಳಿ ನಡೆಸಿದರು.

ಉಪ ಚುನಾವಣೆ ವಿಚಾರವಾಗಿ ನಾವು ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಸುಪ್ರೀಂಕೋರ್ಟ್ ತೀರ್ಪು ಬಂದ ನಂತರ ಪಕ್ಷದ ಅಭ್ಯರ್ಥಿಗಳ ಘೋಷಣೆ ಮಾಡಲಾಗುವುದು. ಈಗಾಗಲೇ ಅಭ್ಯರ್ಥಿ ಪಟ್ಟಿ ಅಂತಿಮವಾಗಿದೆ. ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭಾವನಾತ್ಮಕ ಹೇಳಿಕೆಗಳು ನಡೆಯುವುದಿಲ್ಲ. ಕಾಶ್ಮೀರ ವಿಚಾರ, ಸಂವಿಧಾನದ 370ನೇ ವಿಧಿ ರದ್ದು ವಿಚಾರಗಳು ವರ್ಕೌಟ್ ಆಗಲ್ಲ. ಬಿಜೆಪಿ ವಿರುದ್ಧ ಜನವಿರೋಧಿ ಅಲೆಯಿದೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *