ಪ್ರವಾಹ ಸಂತ್ರಸ್ತರ ನೆರವಿಗೆ ಕೆಪಿಸಿಸಿಯಿಂದ 2 ತಂಡ ರಚನೆ: ದಿನೇಶ್ ಗುಂಡೂರಾವ್

– ಬಿಎಸ್‍ವೈ ಒನ್ ಮ್ಯಾನ್ ಶೋ ನಿಲ್ಲಿಸಲಿ

ಹುಬ್ಬಳ್ಳಿ: ಪ್ರವಾಹ ಪೀಡಿತ ಪ್ರದೇಶಗಳ ಸಂತ್ರಸ್ತರ ನೆರವಿಗಾಗಿ ಕೆಪಿಸಿಸಿಯಿಂದ ಎರಡು ತಂಡಗಳನ್ನು ರಚನೆ ಮಾಡಲಾಗಿದೆ ಎಂದು ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆ ಸಂತ್ರಸ್ತರ ನೆರವಿಗೆ ಕೆಪಿಸಿಸಿ ಮುಂದಾಗಿದ್ದು ಈಗಾಗಲೇ 2 ತಂಡಗಳನ್ನು ರಚನೆ ಮಾಡಲಾಗಿದೆ ಎಂದರು.

ರಾಜ್ಯದಲ್ಲಿ ಆಡಳಿತ ಸಂಪೂರ್ಣ ಸ್ಥಗಿತಗೊಂಡಿದೆ. ಮುಖ್ಯಮಂತ್ರಿಯಾಗಿ ಬಿ.ಎಸ್ ಯಡಿಯೂರಪ್ಪನವರು ಅಧಿಕಾರ ಸ್ವೀಕಾರ ಮಾಡಿಕೊಂಡು 15 ದಿನ ಕಳೆದರೂ ಸಚಿವ ಸಂಪುಟ ರಚನೆ ಮಾಡಿಲ್ಲ. ನೆರೆಪೀಡಿತ ಪ್ರದೇಶಗಳಿಗೆ ತಾವೊಬ್ಬರೇ ಓಡಾಡುತ್ತಿದ್ದಾರೆ. ಒಬ್ಬರೇ ಎಲ್ಲ ಕಡೆನೂ ಓಡಾಡಲು ಸಾಧ್ಯವಾಗುತ್ತಾ ಎಂದು ಪ್ರಶ್ನಿಸಿದ ದಿನೇಶ್, ಬಿಎಸ್‍ವೈ ಅವರು ತಮ್ಮ ಒನ್ ಮ್ಯಾನ್ ಶೋ ನಿಲ್ಲಿಸಬೇಕು ಎಂದು ವಾಗ್ದಾಳಿ ನಡೆಸಿದರು.

ನೆರೆ ಪರಿಹಾರ ಅಷ್ಟೇ ಅಲ್ಲದೆ ರಾಜ್ಯದಲ್ಲಿ ಯಾವೊಂದು ಕೆಲಸಗಳು ಆಗುತ್ತಿಲ್ಲ. ವಿಧಾನಸೌಧ ಬಣಗುಡುತ್ತಿದೆ. ಬಿಜೆಪಿಯವರು ಸಂಚಿವ ಸಂಪುಟ ರಚನೆ ಮಾಡುವುದಕ್ಕೆ ಯಾಕೆ ವಿಳಂಬ ಮಾಡುತ್ತಿದ್ದಾರೋ ಗೊತ್ತಿಲ್ಲ. ಬಹುಶಃ ಅತೃಪ್ತ ಶಾಸಕರಿಗಾಗಿ ಕಾಯುತ್ತಿದ್ದಾರೋ ಏನೋ ಗೊತ್ತಿಲ್ಲ ಎಂದರು.

ರಾಜ್ಯದಲ್ಲಿ ಮುಖ್ಯಮಂತ್ರಿಗಳ ಅನುಯಾಯಿಗಳು ಧಂದೆ ನಡೆಸುತ್ತಿದ್ದಾರೆ. ಟ್ರಾನ್ಸ್ ಫರ್ ಸೇರಿದಂತೆ ಹಲವು ದಂಧೆಗಳಲ್ಲಿ ಭಾಗಿಯಾಗಿದ್ದಾರೆ. ಕೇಂದ್ರದಿಂದ ಇದುವರೆಗೂ ಯಾವೊಬ್ಬ ಸಚಿವರೂ ಕರ್ನಾಟಕಕ್ಕೆ ಬಂದಿಲ್ಲ ಎಂದು ಕಿಡಿಕಾರಿದರು.

Comments

Leave a Reply

Your email address will not be published. Required fields are marked *