ರಾಜ್ಯದಿಂದ ಧೂಳೀಪಟ ಮಾಡಿ, ದಕ್ಷಿಣ ಭಾರತದಿಂದಲೇ ಬಿಜೆಪಿಯನ್ನು ಹೊರಹಾಕ್ತೀವಿ: ದಿನೇಶ್ ಗುಂಡೂರಾವ್

ಬೆಂಗಳೂರು: ಮುಂದಿನ ಲೋಕಸಭೆ ಚುನಾವಣೆಯಲ್ಲಿ ದೇಶದ ರಾಜಕಾರಣವನ್ನು ಬದಲಾಯಿಸುತ್ತೇವೆ. ರಾಜ್ಯದಿಂದ ಧೂಳೀಪಟ ಮಾಡಿ, ದಕ್ಷಿಣ ಭಾರತದಿಂದಲೇ ಬಿಜೆಪಿಯನ್ನು ಹೊರಹಾಕುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಉಪಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳು ಜಯಗಳಿಸಿದ ಹಿನ್ನೆಲೆಯಲ್ಲಿ, ಈ ಬಾರಿ ರಾಜ್ಯದಲ್ಲಿ ಸ್ಪಷ್ಟ ಬಹುಮತದಿಂದ ಮೈತ್ರಿ ಸರ್ಕಾರ ಉಪಚುನಾವಣೆಯ 4 ಕ್ಷೇತ್ರದಲ್ಲಿ ಗೆಲವು ಸಾಧಿಸಿದೆ. ಈಗಾದರೂ ಬಿಜೆಪಿ ತನ್ನ ಉದ್ಧಟತನವನ್ನು ಬಿಡಬೇಕು ಎಂದರು.  ಇದನ್ನು ಓದಿ: ದಿನೇಶ್ ಅವರೇ 4:1 ಅಲ್ಲ, 1:1 ಗೆಲುವು: ಇದು ಪ್ರತಾಪ್ ಸಿಂಹ ವಿಶ್ಲೇಷಣೆ

ನಾಯಕರ ನಕಾರಾತ್ಮಕ ರಾಜಕೀಯ ಹಾಗೂ ಕೇಂದ್ರದಲ್ಲಿ ಮೋದಿ ಸರ್ಕಾರದ ವೈಫಲ್ಯದಿಂದ ಈ ಬಾರಿ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಜನ ತಿರಸ್ಕರಿಸಿದ್ದಾರೆ. ಮೋದಿ ಸರ್ಕಾರ ಯಾವುದೇ ಜನಪರ ಕೆಲಸ ಮಾಡಿಲ್ಲ, ಕೇವಲ ಭಾವನಾತ್ಮಕ ಭಾಷಣ ಬಿಟ್ಟರೇ ಜನರಿಗಾಗಿ ಕೆಲಸ ಮಾಡಿಲ್ಲ. ರಾಜ್ಯದಲ್ಲೂ ಅಷ್ಟೇ ಬಿಜೆಪಿ ಜನಪರ ಕೆಲಸ ಮಾಡಿಲ್ಲ. ಮೈತ್ರಿ ಸರ್ಕಾರ ಬಂದಾಗ ವಿರೋಧ ಪಕ್ಷವಾಗಿ ಹೇಗೆ ಅಧಿಕಾರ ಪಡೆಯಬೇಕು ಅಂತ ಬಿಜೆಪಿ ತಲೆ ಕೆಡಿಸಿಕೊಂಡಿತ್ತೆ ಹೊರತು ಜನರಿಗಾಗಿ ಏನೂ ಮಾಡಿಲ್ಲ. ಯಾವುದೇ ಹೋರಾಟ ಮಾಡಿಲ್ಲ, ಜನಪರ ವಿಚಾರವನ್ನು ಮಾತಾಡಿಲ್ಲ ಎಂದು ಕಿಡಿಕಾರಿದರು.

ಮೈತ್ರಿ ಸರ್ಕಾರ ಎಷ್ಟು ಗಟ್ಟಿಯಾಗಿದೆ ಎಂದು ಈ ಉಪಚುನಾವಣೆಯಿಂದ ತಿಳಿದಿದೆ. ಬಳ್ಳಾರಿಯಲ್ಲಿ ಯಾವ ಅಭ್ಯರ್ಥಿಯನ್ನು ನಿಲ್ಲಿಸಬೇಕು ಅಂತಾ ತುಂಬಾ ಯೋಚನೆಮಾಡಿ ನಂತರ ಉಗ್ರಪ್ಪ ಅವರನ್ನು ಆಯ್ಕೆಮಾಡಲಾಗಿತ್ತು. ಈಗ ಬಿಜೆಪಿಯನ್ನು ಬಳ್ಳಾರಿಯಲ್ಲಿ ಛಿದ್ರ ಛಿದ್ರ ಮಾಡಿ ಜಯ ಗಳಿಸಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.

ಬಳ್ಲಾರಿಯಲ್ಲಿ ಧಣಿಗಣಿಗಳ ದಬ್ಬಾಳಿಕೆಗೆ, ಅಹಂಕಾರಕ್ಕೆ ಜನರೇ ಉತ್ತರ ಕೊಟ್ಟಿದ್ದಾರೆ. ಒಳ್ಳೆಯ ರೀತಿಯಲ್ಲಿ ನಾವು ಸರ್ಕಾರವನ್ನು ನಡೆಸಿಕೊಂಡು ಬರುತ್ತಿದ್ದೇವೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ದೇಶದ ರಾಜಕಾರಣವನ್ನು ಬದಲಾಯಿಸುತ್ತೇವೆ. ಮೋದಿಯವರ ಯಾವುದೇ ಭಾಷಣ ನಡೆಯುವುದಿಲ್ಲ. ನಮಗೆ ಸುಳ್ಳು ಹೇಳೋ ಪ್ರಧಾನಿ ಬೇಡ, ಕೆಲಸ ಮಾಡೋ ಪ್ರಧಾನಿ ಬೇಕು ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

 

 

 

 

 

 

 

 

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *