ನಮ್ಮ ಶಾಸಕರನ್ನು ದಿಗ್ಬಂಧನದಲ್ಲಿಟ್ಟಿದ್ದಾರೆ: ಡಿಕೆಶಿಯಿಂದ ಡಿಜಿಪಿಗೆ ದೂರು

ಬೆಂಗಳೂರು: ಮಧ್ಯ ಪ್ರದೇಶದ ಕಾಂಗ್ರೆಸ್ ಶಾಸಕರನ್ನು ಅಕ್ರಮವಾಗಿ ದಿಗ್ಬಂಧನದಲ್ಲಿಟ್ಟಿದ್ದಾರೆ ಎಂದು ಆರೋಪಿಸಿ ನಿಯೋಜಿತ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಡಿಜಿಪಿಗೆ ದೂರು ನೀಡಿದ್ದಾರೆ.

ಮಧ್ಯಪ್ರದೇಶದ ಬಿಜೆಪಿ ಮುಖಂಡ ಜೀತು ಪಟ್ವಾರಿ ಹಾಗೂ ಮಧ್ಯಪ್ರದೇಶದ ಕಾಂಗ್ರೆಸ್ ಎಂಎಲ್‍ಎ ಮನೋಜ್ ಚೌಧರಿಯನ್ನು ಬೆಂಗಳೂರಿಗೆ ಕರೆತಂದು ಅಕ್ರಮವಾಗಿ ಇರಿಸಿಕೊಂಡಿದ್ದಾರೆ. ಮನೋಜ್ ಚೌಧರಿ ತಂದೆ ನಾರಾಯಣ ಚೌಧರಿ ಮಗನನ್ನು ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದಾರೆ.

ನನ್ನ ಮಗ ಮನೋಜ್ ಚೌಧರಿ ನನಗೆ ಕರೆ ಮಾಡಿ, “ನನ್ನನ್ನು ದಿಗ್ಬಂಧನದಲ್ಲಿಟ್ಟಿದ್ದಾರೆ, ಬಂದು ನನ್ನನ್ನು ಬಿಡಿಸಿಕೊಂಡು ಹೋಗಿ ಎಂದು ಫೋನ್ ಮಾಡಿದ್ದನು. ಹಾಗಾಗಿ ನಾನು ಮಧ್ಯಪ್ರದೇಶದಿಂದ ಬೆಂಗಳೂರಿಗೆ ಬಂದಿದ್ದೇನೆ. ಆದರೆ ಪೊಲೀಸರು ಮಾತ್ರ ಮಗನ ಭೇಟಿಗೆ ಅವಕಾಶ ನೀಡುತ್ತಿಲ್ಲ ಎಂದು ಮನೋಜ್ ಚೌಧರಿ ತಂದೆ ನಾರಾಯಣ ಚೌಧರಿ ಅವರು ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ತಮ್ಮ ನೋವನ್ನು ಹೊರ ಹಾಕಿದರು.

ಈ ವಿಚಾರ ತಿಳಿದ ಡಿಕೆಶಿ, ನಾರಾಯಣ ಚೌಧರಿ ಜೊತೆಗೆ ಡಿಜಿಪಿ ಕಚೇರಿ ಆಗಮಿಸಿ ಎಡಿಜಿಪಿ ಅಮರ್ ಕುಮಾರ್ ಪಾಂಡೆಗೆ ದೂರು ನೀಡಿದರು. ಬಿಜೆಪಿಯವರು ಏನು ಬೇಕಾದರೂ ಮಾಡಿಕೊಳ್ಳಲಿ. ಆದರೆ ಮಗನ ಭೇಟಿಗೆ ಅಪ್ಪನಿಗೂ ಅವಕಾಶ ಕೊಡದೇ ಇರುವುದು ನಿಜಕ್ಕೂ ಆತಂಕಕಾರಿ ವಿಚಾರ. ಆದಷ್ಟು ಬೇಗ ಅವರಿಗೆ ಮಗನ ಭೇಟಿಗೆ ಅವಕಾಶ ಮಾಡಿಕೊಡಬೇಕು. ಬಿಜೆಪಿಗರು ನಮ್ಮ ಕಾಂಗ್ರೆಸ್ ಶಾಸಕರನ್ನು ಅಕ್ರಮವಾಗಿ ದಿಗ್ಬಂಧನದಲ್ಲಿಟ್ಟಿದ್ದಾರೆ ಎಂದು ಡಿಕೆಶಿ ಬಿಜೆಪಿ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *