10 ದಿನದೊಳಗೆ ಸಾಲ ಕಟ್ಟಿಲ್ಲಾಂದ್ರೆ ಜಮೀನು ಹರಾಜಿಗೆ ಹಾಕ್ತೀವಿ- ಕೊಪ್ಪಳ ರೈತರಿಗೆ ನೋಟಿಸ್

ಕೊಪ್ಪಳ: 10 ದಿನಗಳೊಳಗೆ ಸಾಲ ಕಟ್ಟಿ. ಇಲ್ಲವೆಂದಲ್ಲಿ ನಿಮ್ಮ ಜಮೀನು ಹರಾಜಿಗೆ ಹಾಕ್ತೀವಿ ಎಂದು ಜಿಲ್ಲೆಯ ರೈತರಿಗೆ ಬ್ಯಾಂಕ್ ನೋಟಿಸ್ ನೀಡಿದೆ.

ಕೊಪ್ಪಳದ ಕುಷ್ಟಗಿ ತಾಲೂಕಿನ ಸಂಗನಾಳ ಗ್ರಾಮದ ದಾಳಿಂಬೆ ಬೆಳೆಗಾರರಿಗೆ ಬ್ಯಾಂಕ್ ಲೀಗಲ್ ನೋಟಿಸ್ ನೀಡಿದೆ. ಈ ಮೂಲಕ ಸಾಲದ ಜೋತೆಗೆ ಬಡ್ಡಿ, ಸುಸ್ತಿ ಬಡ್ಡಿ ಕಟ್ಟುವಂತೆ ಒತ್ತಾಯಿಸಲಾಗಿದೆ. ತೆಗೆದುಕೊಂಡ ಸಾಲಕ್ಕೆ ಶೇ.15ರಷ್ಟು ಬಡ್ಡಿ ಸಮೇತ ಕಟ್ಟುವಂತೆ ನೋಟಿಸಿನಲ್ಲಿ ತಿಳಿಸಲಾಗಿದೆ. ಅಲ್ಲದೆ 10 ದಿನದೊಳಗೆ ಸಾಲ ಮರುಪಾವತಿ ಮಾಡದಿದ್ದರೆ ಜಮೀನು ಜಪ್ತಿ ಮಾಡುವುದಾಗಿ ಬ್ಯಾಂಕ್ ಕಿರುಕುಳ ನೀಡಿದೆ ಎಂಬ ಆರೋಪ ಕೇಳಿ ಬಂದಿದೆ.

 

ಮಾಜಿ ಸಿಎಂ ಕುಮಾರಸ್ವಾಮಿ ಅವರು ದಾಳಿಂಬೆ ಬೆಳೆಗಾರರ ಸಾಲಮನ್ನಾ ಮಾಡಲು ಅನುದಾನ ಮಿಸಲಿಟ್ಟಿದ್ದರು. ಆದರೆ ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದಾಗಿನಿಂದ ದಾಳಿಂಬೆ ಬೆಳೆಗಾರರ ಸಾಲಮನ್ನಾದ ಬಗ್ಗೆ ಚಕಾರವೇ ಎತ್ತಿಲ್ಲ. ಹೀಗಾಗಿ ರೈತರು ಇದೀಗ ಬ್ಯಾಂಕ್ ಕಿರುಕುಳದಿಂದ ಬೇಸತ್ತಿದ್ದಾರೆ.

ಒಟ್ಟಿನಲ್ಲಿ ಕುಮಾರಸ್ವಾಮಿ ಸಾಲಮನ್ನಾದಿಂದ ನಿಟ್ಟುಸಿರು ಬಿಟ್ಟಿದ್ದ ದಾಳಿಂಬೆ ಬೆಳೆಗಾರರು ಇದೀಗ ಮತ್ತೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ನಮಗೆ ಬ್ಯಾಂಕ್ ಕಿರುಕುಳದಿಂದ ಮುಕ್ತಿ ಕೊಡಿಸಿ ನಮ್ಮ ಸಾಲಮನ್ನಾ ಮಾಡಿಸಿ ಎಂದು ಸಿಎಂ ಬಿಎಸ್‍ವೈ ಗೆ ರೈತ ಮುಖಂಡರ ಮನವಿ ಮಾಡಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *