ಟೆನ್ಷನ್‍ನಲ್ಲಿ ಕೊಪ್ಪಳ ಸಂಸದ ಸಂಗಣ್ಣ ಕರಡಿ – ಬಿಎಸ್‍ವೈ ನಿವಾಸಕ್ಕೆ ಭೇಟಿ

ಬೆಂಗಳೂರು: ಲೋಕಸಭಾ ಚುನಾವಣೆ ಟಿಕೆಟ್ ಆಕಾಂಕ್ಷಿಯಾಗಿರುವ ಕೊಪ್ಪಳ ಸಂಸದ ಸಂಗಣ್ಣ ಕರಡಿ ಇಂದು ಬಿ.ಎಸ್. ಯಡಿಯೂರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಮಾತನಾಡಿದ್ದಾರೆ.

ಕೊಪ್ಪಳ ಸೇರಿದಂತೆ ಇನ್ನೂ 5 ಕ್ಷೇತ್ರಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಘೋಷಿಸಿಲ್ಲ. ಹೀಗಾಗಿ ತಮಗೇ ಟಿಕೆಟ್ ನೀಡುವಂತೆ ಸಂಗಣ್ಣ ಕರಡಿ ಡಾಲರ್ಸ್ ಕಾಲೋನಿಯಲ್ಲಿ ಯಡಿಯೂರಪ್ಪ ನಿವಾಸಕ್ಕೆ ಭೇಟಿ ಕೊಟ್ಟು ದುಂಬಾಲು ಬಿದ್ದಿದ್ದಾರೆ. ಈ ಮಧ್ಯೆ ಸಂಗಣ್ಣರಿಗೆ ಟಿಕೆಟ್ ನೀಡುವುದಾಗಿ ಬಿಎಸ್‍ವೈ ಭರವಸೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಬಿಎಸ್‍ವೈ ಭೇಟಿಯ ಬಳಿಕ ಮಾತನಾಡಿದ ಸಂಗಣ್ಣ ಕರಡಿ, ನನಗೆ ಟೆನ್ಶನ್ ಇಲ್ಲ. ಬೇರೆ ಕಾರಣಗಳಿಗೆ ಟಿಕೆಟ್ ಘೋಷಣೆ ಸ್ವಲ್ಪ ವಿಳಂಬ ಆಗಿರಬಹುದು. ಯಾರ ವಿರೋಧ ಇಲ್ಲ. ಪ್ರಧಾನಿ ಮೋದಿಯವರು ಕೊಪ್ಪಳದಲ್ಲಿ ಸ್ಪರ್ಧಿಸಿದರೆ ಅದಕ್ಕಿಂತ ದೊಡ್ಡ ಸೌಭಾಗ್ಯ ಏನಿದೆ?, ಅವರು ಸ್ಪರ್ಧಿಸಿದರೆ ನಾವೆಲ್ಲರೂ ಸ್ವಾಗತ ಮಾಡುತ್ತೇವೆ ಎಂದು ಹೇಳಿದ್ದಾರೆ.

ಇಂದು ಸಂಜೆಯೊಳಗೆ ಬಿಜೆಪಿಯ ಎಲ್ಲ ಬಾಕಿ ಇರುವ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುತ್ತದೆ. ಕೊಪ್ಪಳದಿಂದ ಸಂಗಣ್ಣ ಕರಡಿಯವರಿಗೆ ಟಿಕೆಟ್ ನೀಡುವುದು ಬಹುತೇಕ ನಿಶ್ಚಿತವಾಗಿದೆ. ಬೆಂಗಳೂರು ದಕ್ಷಿಣದ ಟಿಕೆಟ್ ಬಗ್ಗೆಯೂ ಸಂಜೆಯೊಳಗೆ ಇತ್ಯರ್ಥವಾಗುತ್ತದೆ ಎಂದು ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.

Comments

Leave a Reply

Your email address will not be published. Required fields are marked *